ಇಎನ್ಎಲ್ ಅಣ್ಣಿಗೇರಿ: ಗ್ರಾಮೀಣ ಮಕ್ಕಳ ಶಿಕ್ಷಣದ ಉಜ್ವಲ ಭವಷ್ಯಕ್ಕೆ ತಮ್ಮ ಹೊಲ-ಮನೆ ಮಾರಾಟ ಮಾಡಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ನಿಸ್ವಾರ್ಥ ಸೇವೆಗೈದ ಶಿಕ್ಷಣ ಪ್ರೇಮಿ ರಾವಸಾಹೇಬ ದೇಸಾಯಿ ಸೇವೆ ಶ್ಲಾಘನೀಯವೆಂದು ವಿಜಯಪುರದ ವಿವೇಕಾನಂದ ಆಶ್ರಮದ ನಿರ್ಭಯಾನಂದ ಶ್ರೀಗಳು ಆರ್ಶೀವಚನದಲ್ಲಿ ನುಡಿದರು.
ಅಣ್ಣಿಗೇರಿ ಶಿಕ್ಷಣ ಸಂಸ್ಥೆ ಚೇರಮನ್ ಆರ್.ಎ.ದೇಸಾಯಿ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಾಗೂ ಅಮೃತ ಹೃದಯಿ ರಾವ್ಸಾಹೇಬ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ನಂತರ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಇಂಗ್ಲೀಷ ಮಾಧ್ಯಕ್ಕೆ ಹೆಚ್ಚು ಪ್ರಾಧನ್ಯತೆ ನೀಡಿ ಪೋಷಕರು ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಒಲವು ತೋರುತ್ತಿರೋದು ಕಂಡುಬರುತಿದೆ. ಆದರೆ ಆರ್.ಎ. ದೇಸಾಯಿ ಅವರು ಕನ್ನಡ ಮಾಧ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ಮೂಲಕ ನರ್ಸರಿಯಿಂದ ಪದವಿವರೆಗೂ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಬೆಳೆಸುತ್ತಿರೋದು ಮಾತೃಭಾಷೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ನೀಡುವ ಗೌರವ ಅನುಪಮವೆಂದು ಹೇಳಿದರು.
ಅಕ್ಷರ ಸಂತ ರಾವಸಾಹೇಬ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸುಧೀರ್ಘ 50 ವರ್ಷದ ನಮ್ಮ ಗೆಳತನದಲ್ಲಿ ಬದುಕಿನುದ್ದಕ್ಕೂ ಶಿಕ್ಷಣ ಸಂಸ್ಥೆಯಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ರಾವಸಾಹೇಬ ಸಾಧನೆ ಮಾಡುತ್ತಿರೋದು ಸಂತಸ ತಂದಿದೆ. ತಮ್ಮ ಆಸ್ತಿ ಕಳೆದುಕೊಂಡು ಶಿಕ್ಷಣಸಂಸ್ಥೆ ಬೆಳೆಸಿದ ಅಪರೂಪದ ವ್ಯಕ್ತಿ ತಮ್ಮ ಸ್ನೇಹಿತ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತಿದೆ ಎಂದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ ರಾವಸಾಹೇಬನಂತ ಸ್ನೇಹ ಜೀವಿ ಪಡೆದಿದ್ದು ನನ್ನ ಸೌಭಾಗ್ಯ, ಸರಸ್ವತಿ ಸೇವೆಗೆ ತಮ್ಮ ಬದುಕನ್ನೆ ಮುಡುಪಿಟ್ಟು, ಗ್ರಾಮೀಣ ಬಡ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿ ಪ್ರಜ್ವಲಿಸುತ್ತಿರುವ ನನ್ನ ಸ್ನೇಹಿತನಿಗೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ರಾವಸಾಹೇಬ ಶಿಕ್ಷಕನಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮಲಾಗ್ರ ಬದಲಾವಣೆ ತರುವಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು, ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಕೈಗೊಂಡ ಸಾಧನೆ ಮಾರ್ಗ ನಮ್ಮೆಲರಿಗೆ ಮಾದರಿ, ಶಿಕ್ಷಣ ಸಂಸ್ಥೆಯ ಮಕ್ಕಳನ್ನು ಶಿಕ್ಷಣ ನೀಡುವ ಮೂಲಕ ಶಿಕ್ಷಣ ಸಂಸ್ಥೆಯ ಅಸ್ತಿಯನ್ನಾಗಿ ಬೆಳೆಸಿದರು. ಅಮೃತ ಹೃದಯಿ ಸ್ನೇಹಿತ ರಾವಸಾಹೇಬ ಅಕ್ಷರ ಸಂತ, ಕನ್ನಡಭಾಷೆ, ಶಿಕ್ಷಣಪ್ರೇಮಿ, ನಿಷ್ಠೆ, ಕಾಯಕ, ಕರ್ತವ್ಯ ನಿಭಾಸುತ್ತಿರುವ ನಿಸ್ವಾರ್ಥ ಸೇವೆ ಸಾಧನೆ ನಿರಂತರ ಸಾಗಲಿ. ದೇವರು ಅವರಿಗೆ ಆರೋಗ್ಯ, ಆಯುಷ್ಯ ಸಂಪತ್ತು ನೀಡಿ ಚಿರಕಾಲ ಬಾಳುವಂತಾಗಲಿ ಎಂದರು.
ಶಿಕ್ಷಣಪ್ರೇಮಿ ರಾವಸಾಹೇಬ ಅವರನ್ನು ಪಟ್ಟಣದ ಶಿಕ್ಷಣ ಸಂಸ್ಥೆಗಳ ಮುಖಂಡರು, ಶಿಕ್ಷಕರ ವೃಂದ ಸಿಬ್ಬಂದಿವರ್ಗ, ವಿದ್ಯಾರ್ಥಿವೃಂದ, ಅನೇಕ ಸಂಘ ಸಂಸ್ಥೆಗಳ ಮುಖಂಡರು, ಗಣ್ಯಮಾನ್ಯರು, ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತ ಆರ್.ಎ.ದೇಸಾಯಿ ಮಾತನಾಡಿ, ತಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರದಿಂದ ಸುದೀರ್ಘ ಕಾಲ ಶಿಕ್ಷಣ ಸಂಸ್ಥೆಯಲ್ಲಿ ಸೇವೆಗೈಯುಲು ಅವಕಾಶ ಕಲ್ಪಸಿ ಗೌರವಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಣ್ಣಿಗೇರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಬಿ.ದೇಶಪಾಂಡೆ, ರಮೇಶ ಜಂಗಲ್, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸರ್ವಸದಸ್ಯರು, ಪ್ರಾಚಾರ್ಯರು, ಪ್ರಧಾನ ಗುರುಗಳು, ಶಿಕ್ಷಕರ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.