24.8 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಜಲಜೀವನ್ ಮಿಷನ್ ಯೋಜನೆ- ದೂರದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ:ಸಂಸದ ಶಿವಕುಮಾರ ಉದಾಸಿ

ಇಎನ್ಎಲ್ ಹಾವೇರಿ: ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲಾಗುತ್ತಿದ್ದು, ದೂರದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸಂಸದರಾದ ಶಿವಕುಮಾರ ಉದಾಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” ಕಾರ್ಯಕ್ರಮದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಜೀವನ್ ಯೋಜನೆಯಡಿ ಮನೆ, ಅಂಗನವಾಡಿ ಹಾಗೂ ಶಾಲೆಗಳಿಗೆ ನಳದ ನೀರು ಸಂಪರ್ಕ ಕಲ್ಪಿಸಲಾಗುತ್ತಿದೆ. ಇಂತಹ ದೊಡ್ಡ ಯೋಜನೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.
ಈ ಯೋಜನೆಯ ಕಾಮಗಾರಿಗೆ ರೂ.400 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರ ಬಳಕೆ ಎಷ್ಟು ದಿನ ಬರಬಹುದು ಹಾಗೂ ಮುಂದಿನ ದಿನಗಳಲ್ಲಿ ಕಾಮಗಾರಿ ದುರಸ್ಥಿಗೆ ಬೇಕಾದ ಹಣಕಾಸಿನ ಕ್ರಿಯೋಜನೆಯನ್ನು ತಯಾರಿಸಬೇಕು. ಬಹಳ ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಪ್ರದೇಶ ವಿಸ್ತೀರ್ಣಕ್ಕೆ ಪ್ರೋತ್ಸಾಹಿಸಬೇಕು. ಪ್ರಥಮಬಾರಿಗೆ ಶುಂಠಿ ಬೆಳೆಯಲು ರೂ.31 ಸಾವಿರ ಸಹಾಯಧನ ಸೌಲಭ್ಯವಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಮಾತನಾಡಿ, ಡಿಸೆಂಬರ್ ಅಂತ್ಯದವೆರೆಗ 49,11,980 ಮಾನವ ದಿನಗಳನ್ನು ಸೃಜಿಸಲಾಗಿದೆ ಹಾಗೂ 19353.42 ಲಕ್ಷ ರೂ. ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹಾಗೂ ತೋಟಗಾರಿಕೆ ಇಲಾಖೆಯ ಒಗ್ಗೂಡಿಸುವಿಕೆಯಡಿ ತೋಟಗಾರಿಕೆ ಬೆಳೆಗಳವಾರು 19 ಕ್ಲಸ್ಟರ್‍ಗಳನ್ನು ರಚಿಸಲಾಗಿದೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ಬಾಳೆ, ಪೇರಲೆ, ಪಪ್ಪಾಯ ಮತ್ತು ವಿಳ್ಯದೆಲೆ ಬೆಳೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. 2,500 ಎಕರೆ ಕ್ಲಸ್ಟರ್ ಪ್ರದೇಶ ವಿಸ್ತರಿಸಲಾಗಿದ್ದು, 1950 ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡಿದ್ದಾರೆ. 1.25 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ ಹಾಗೂ 361.25 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ಆಯಾ ಮಾಹೆಯಲ್ಲಿ ಮಾಶಾಸನ ದೊರೆಯುವಂತೆ ಕ್ರಮವಹಿಸಬೇಕು. ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯ ನಿರ್ವಹಣೆ ಸೂಕ್ತ ರೀತಿಯಲ್ಲಿ ಕೈಗೊಳ್ಳಲು ವ್ಯವಸ್ಥೆಯಾಗಬೇಕು. ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಗೆ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಕೆಲಸವಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಹೆಸ್ಕಾಂ ಸೇರಿದಂತೆ ವಿವಿಧ 18 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪಬೇಕು ಹಾಗೂ ನಿಗಧಿತ ಗುರಿ ಸಾಧಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಉಪಸ್ಥಿತರಿದ್ದರು.
ಚೆಕ್, ಲ್ಯಾಪ್‍ಟಾಪ್ ವಿತರಣೆ: ಸಭೆ ಮುನ್ನ ಸಂಸದರಾದ ಶಿವಕುಮಾರ ಉದಾಸಿ ಅವರು ಮಹಾತ್ಮಗಾಂಧಿ ನರೇಗಾ ಯೋಜನೆ ಸಿಬ್ಬಂದಿಗಳಿಗೆ ಲ್ಯಾಪ್‍ಟಾಪ್, ಮಹಾತ್ಮಗಾಂಧಿ ನರೇಗಾ ಯೋಜನೆ ಮಹಿಳಾ ಕಾಯಕ ಮಿತ್ರರಿಗೆ ಸಮವಸ್ತ್ರ, ಎಸ್.ಸಿ. ಮತ್ತು ಎಸ್.ಟಿ. ವರ್ಗದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಮಂಜೂರಾತಿ ಚೆಕ್ ವಿತರಣೆ ಮಾಡಿದರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿ “ಕೈಪಿಡಿ” ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಜಿ.ಪಂ.ಉಪ ಕಾರ್ಯದರ್ಶಿ ಎಸ್..ಬಿ..ಮುಳ್ಳಳ್ಳಿ ಉಪಸ್ಥಿತರಿದ್ದರು.

Related posts

ಕೋವಿಡ್ ಹೊಸ ಅಲೆ ಎದುರಿಸಲು ಸಜ್ಜಾದ ನೈಋತ್ಯ ರೈಲ್ವೆ

eNEWS LAND Team

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ರಚನೆಗೆ ಚಿಂತನೆ

eNewsLand Team

ಅಣ್ಣಿಗೇರಿ ಪುರಸಭೆ ಚುನಾವಣೆಗೆ ಮಹೂರ್ತ ಫಿಕ್ಸ್.

eNEWS LAND Team