ಇಎನ್ಎಲ್ ಧಾರವಾಡ: ಕಸಬಾಪೇಟ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ವಿವಿಧೆಡೆ ಐದು ಮನೆಗಳವು ಮಾಡಿದ್ದ ಕಳ್ಳ ಹಾಗೂ ಕದ್ದ ಮಾಲು ಖರೀದಿ ಮಾಡುತ್ತಿದ್ದ ಇಬ್ಬರು ಭೂಪರನ್ನು ಬಂಧಿಸಿ ಬರೋಬ್ಬರಿ 3.90 ಲಕ್ಷ ರು. ಚಿನ್ನ, ಬೆಳ್ಳಿಯ ಆಭರಣ ವಶಕ್ಕೆ ಪಡೆದಿದ್ದಾರೆ.
2020ರ ನವೆಂಬರ್ ತಿಂಗಳಲ್ಲಿ ಹಳೇಹುಬ್ಬಳ್ಳಿ ಗೌಸಿಯಾ ಟೌನ್ ಮತ್ತು ಅಲ್ತಾಪ್ ಪ್ಲಾಟ್ ಹಾಗೂ 2021ರ ಏಪ್ರೀಲ್ ತಿಂಗಳಲ್ಲಿ ಈಶ್ವರ ನಗರದಲ್ಲಿ ಜುಲೈ ತಿಂಗಳಲ್ಲಿ ಗೌಸಿಯಾ ನಗರದಲ್ಲಿ ಅಕ್ಟೋಬರ್ ತಿಂಗಳಲ್ಲಿ ರಣದಮ್ಮ ಕಾಲೋನಿಯಲ್ಲಿ ಬೀಗ ಹಾಕಿದ ಮನೆಗಳ ಕೀಲಿ ಮುರಿದು ಕಳುವು ಮಾಡಿದ್ದ ಒಟ್ಟು 5 ಪ್ರಕರಣದ ಆರೋಪಿ ಬಂಧಿಸಿದ್ದಾರೆ. ಅಲ್ಲದೆ ಕದ್ದ ಚಿನ್ನಾಭರಣ ಖರೀದಿ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ.
ಮೂವರಿಂದ ಒಟ್ಟು 95 ಗ್ರಾಂ ( ಅಂದಾಜು ಮೌಲ್ಯ 3 .80 ಲಕ್ಷ ರು.) ಬಂಗಾರ ಆಭರಣ ಹಾಗೂ ಒಟ್ಟು 183 ಗ್ರಾಂ (ಅಂದಾಜು ಮೌಲ್ಯ 10800 ರು.-) ಬೆಳ್ಳಿ ಆಭರಣಗಳನ್ನು ಜಪ್ತು ಮಾಡಿದ್ದಾರೆ. ಬಳಿಕ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳ್ಳ ತನ್ನ ಊರಿನಿಂದ ಹುಬ್ಬಳ್ಳಿಗೆ ಬಂದು ಕೀಲಿ ಹಾಕಿದ ಮನೆಗಳನ್ನು ಒಂದೆರಡು ದಿನ ಗಮನಿಸಿ ಬಳಿಕ ಮನೆಗಳ ಕೀಲಿ ಮುರಿದು ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ತನ್ನ ಊರಿಗೆ ಹೋಗಿ ವಿಲೇವಾರಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ ಕಸಬಾಪೇಟ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಜಿ. ಕುಂಬಾರ ಮತ್ತು ಎಸ್.ಎಲ್ ಕಸ್ತೂರಿ, ಪಿ.ಎಸ್.ಐ (ಅ ವಿ) ಹಾಗೂ ಸಿಬ್ಬಂದಿ ತಂಡದ ಈ ಕಾರ್ಯವೈಖರಿಯನ್ನು ಹುಧಾ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.