ಇಎನ್ಎಲ್ ಹಾವೇರಿ
ಶ್ಯಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಕಬ್ಬಿನ ಬೆಳೆ ಹಾನಿ ಪರಿಹಾರ ಮೊತ್ತವನ್ನು ರೈತನಿಗೆ ನೀಡಲು ಹೆಸ್ಕಾಂಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಮದ ಬಸಪ್ಪ ನಿಂಗಪ್ಪ ಕೊಪ್ಪದ ಅವರು ತಮ್ಮ ಕಬ್ಜಾ ವಹಿವಾಟವುಳ್ಳ ಬ್ಯಾಡಗಿ ತಾಲೂಕು ತುಮರಿಕೊಪ್ಪ ಗ್ರಾಮದ ಜಮೀನಿನಲ್ಲಿ 2018ನೇ ಸಾಲಿನಲ್ಲಿ ಕಬ್ಬು ಬೆಳೆದಿದ್ದರು. ಈ ಜಮೀನಲ್ಲಿ ಹಾದು ಹೋಗಿರುವ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ತೀರಾ ಕೆಳಗಡೆ ಜೋತಾಡುತ್ತಿತ್ತು. 2018 ರಲ್ಲಿ ಒಂದಕ್ಕೊಂದು ತಾಗಿ ವಿದ್ಯುತ್ ಶ್ಯಾರ್ಟ್ ಸರ್ಕ್ಯೂಟ್ ವೇಳೆ ಸಂಭವಿಸಿದ ಕಾರಣ ಕಟಾವಿಗೆ ಬಂದ ಕಬ್ಬಿನ ಬೆಳೆಗೆ ಬೆಂಕಿ ವ್ಯಾಪಿಸಿ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಹೆಸ್ಕಾಂನವರು ಯಾವುದೇ ಪರಿಹಾರ ನೀಡದ ಕಾರಣ ರೈತ ಬಸಪ್ಪ ಅವರು ಪರಿಹಾರ ಹಣಕ್ಕಾಗಿ ಕಳೆದ ಫೆ.24ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಬಸಪ್ಪ ನಿಂಗಪ್ಪ ಕೊಪ್ಪದ ಅವರಿ 3,13,680 ರು. ಪರಿಹಾರ ಹಣ ಹಾಗೂ ಮಾನಸಿಕ ವ್ಯಥೆಗಾಗಿ 1ಸಾವಿರ ರು. ಮೊತ್ತವನ್ನು 30 ದಿನದೊಳಗೆ ನೀಡಲು ದಿನಾಂಕ ನ. ರಂದು ಹೆಸ್ಕಾಂಗೆ ಆದೇಶಿಸಿದ್ದಾರೆ. ವಿಳಂಬ ಮಾಡಿದರೆ ವಾರ್ಷಿಕ ಶೇ.6ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚನೆ ನೀಡಿದೆ.