ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್
ಅವತ್ತು ಘಳಿಗೆ ಸರಿ ಇರಲಿಲ್ಲ. ಮಹ್ಮದ್ ಬೈಕು ಅಪಘಾತವಾಯಿತು. ಎಡಗಾಲು ಊನವಾಯಿತು. ಕ್ರಿಕೆಟ್ ನಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದ ಕನಸಿಗೆ ಧಕ್ಕೆ ಆಯಿತು. ಆದರೆ ಛಲ ಬಿಡದ ಈತ ಸಾಧನೆ ಮಾಡಿದ..ಮುನ್ನುಗ್ಗಿದ.. ಇವತ್ತು ಭಾರತದ ದಿವ್ಯಾಂಗ ಕ್ರಿಕೆಟ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾನೆ..
ಇದು ಹಳೆ ಹುಬ್ಬಳ್ಳಿಯ ನೇಕಾರ ನಗರ ನೂರಾನಿ ಪ್ಲಾಟ್ನ ನಿವಾಸಿಯಾದ ಮಹ್ಮದ್ ಜಾವೇದ್ ದಾಸ್ತಿಕೊಪ್ಪ ಕಥೆ..
ಬಾಂಗ್ಲಾದೇಶದಲ್ಲಿ ಮಾ. 27ರಿಂದ 31ರವರೆಗೆ ನಾಲ್ಕು ದೇಶಗಳ ದಿವ್ಯಾಂಗ ಕ್ರಿಕೆಟ್ ಪಂದ್ಯಾವಳಿಗಾಗಿ ಭಾರತ ತಂಡಕ್ಕೆ ಹುಬ್ಬಳ್ಳಿಯ ಮಹ್ಮದ್ ಜಾವೇದ್ ದಾಸ್ತಿಕೊಪ್ಪ ಆಯ್ಕೆಯಾಗಿದ್ದಾರೆ. ಕರ್ನಾಟಕದ ಡಿಸಿಸಿಬಿಐ ತಂಡದ ನಾಯಕ ಹುಬ್ಬಳ್ಳಿಯ ಭೂಸಪೇಟೆಯ ಮಹೇಶ ಅಗಳಿ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ನಡುವಿನ ದಿವ್ಯಾಂಗ ಕ್ರಿಕೆಟ್ ಟೂರ್ನಾಮೆಂಟ್ ಇದಾಗಿದೆ. ಸಿ (ದಿವ್ಯಾಂಗ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಆಫ್ ಇಂಡಿಯಾ) ಆಯ್ಕೆ ಸಮಿತಿ ಹುಬ್ಬಳ್ಳಿಯ ಈ ಇಬ್ಬರು ಆಲ್ ರೌಂಡರ್ ಗಳನ್ನು ತಂಡಕ್ಕೆ ಆಯ್ಕೆ ಮಾಡಿದೆ. ಜೊತೆಗೆ ರಾಯಚೂರು ಸಣ್ಣ ಮಾರೇಶ, ವಿಜಯಪುರದ ಮಹಾಂತೇಶ ಚಲವಾದಿ ಕೂಡ ತಂಡದಲ್ಲಿದ್ದಾರೆ.
ಮಹ್ಮದ ದಾಸ್ತಿಕೊಪ್ಪ ಇದೆ ಮೊದಲ ಬಾರಿ ದಿವ್ಯಾಂಗರ ಅಂತಾರಾಷ್ಟ್ರೀಯ ಏಕದಿನ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಇವರು ಕಿರಾಣಿ ಅಂಗಡಿ ನಡೆಸಿಕೊಂಡಿದ್ದಾರೆ.
ಮೊದಲಿಂದಲೂ ಕ್ರಿಕೆಟಿಗರಾಗಿದ್ದ ಜಾವೇದ್ ಅಪಘಾತದಲ್ಲಿ ಎಡಗಾಲು ಊನವಾದ ಬಳಿಕ ಅಂಗವಿಕಲರ ತಂಡ ಸೇರ್ಪಡೆಯಾದರು. ಇದರ ಜೊತೆಗೆ ಗಟ್ಟೂರ ಬೈಪಾಸ್ ಬಳಿ ತಮ್ಮದೆ ಆದ ಎಂಜಿ ಕ್ರಿಕೆಟ್ ಅಕಾಡೆಮಿ ತೆರೆದು ತರಬೇತಿಯನ್ನೂ ನೀಡುತ್ತಿದ್ದಾರೆ. ಈವರೆಗೆ ರಾಜ್ಯ ತಂಡದ ಪರವಾಗಿ ಮಧ್ಯಪ್ರದೇಶ ರಾಜಸ್ಥಾನ, ಜಮ್ಮು, ಗುಜರಾತ್ ಸೇರಿ ಇತರೆ ರಾಜ್ಯಗಳ ವಿರುದ್ಧ ಆಡಿದ ಅನುಭವ ಹೊಂದಿದ್ದಾರೆ.
ಭೂಸಪೇಟೆ ದೇಸಾಯಿ ಒಣಿಯ ಮಹೇಶ ಅಗಳಿ ಕರ್ನಾಟಕ ದಿವ್ಯಾಂಗ ತಂಡದ (ಡಿಸಿಸಿಬಿಐ) ಕ್ಯಾಪ್ಟನ್ ಆಗಿದ್ದಾರೆ. ಸಿಂಗಪುರ, ಮಲೇಷ್ಯಾ, ಶ್ರೀಲಂಕಾ ಸೇರಿ ಐದು ಬಾರಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಹೆಸ್ಕಾಂನಲ್ಲಿ ಗುತ್ತಿಗೆ ನೌಕರರಾಗಿರುವ ಇವರು ಹುಟ್ಟಿನಿಂದ ಇದ್ದ ಬಲಗೈ ತೊಂದರೆಯನ್ನು ಮೀರಿ ಕ್ರಿಕೆಟ್ ನಲ್ಲಿ ಸಾಧನೆ ಮಾಡುತ್ತಿದ್ದಾರೆ.