ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಇರಿಸಲು ಮೆಟ್ರೋ ಸ್ಟೇಷನ್ ನಲ್ಲಿ ಇರುವ ಸುರಂಗದಲ್ಲಿ ಇರಿಸಲಾಗಿದೆ. ಇಲ್ಲಿನ ಬಂಕರ್’ಗಳಲ್ಲಿ ಇಟ್ಟು ಪರಿಸ್ಥಿತಿ ನೋಡಿಕೊಂಡು ಸ್ವದೇಶಕ್ಕೆ ಕಳಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಎನ್ಎಲ್ ಧಾರವಾಡ:
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಚೈತ್ರಾ ಗಂಗಾಧರ ಸಂಶಿ ಹಾಗೂ ಹುಬ್ಬಳ್ಳಿಯ ಕೇಶ್ವಾಪುರದ ಸುಶ್ಮಿತಾ ನಾಗೇಂದ್ರ ಯುದ್ಧ ಪೀಡಿತ ಉಕ್ರೇನ್’ನಲ್ಲಿ ಸಿಲುಕಿದ್ದು, ಭಾರತಕ್ಕೆ ಮರಳಲು ಹಂಬಲಿಸುತ್ತಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಹೂಡಿರುವ ಪರಿಣಾಮ ಕರ್ನಾಟಕದ 10ಸಾವಿರ ಸೇರಿದಂತೆ ಭಾರತದ ಲಕ್ಷಾಂತರ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲಾಗದೆ ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
ಗಂಗಾಧರ ಹಾಗೂ ಸುನಂದಾ ದಂಪತಿಗೆ ಚೈತ್ರಾ ಏಕೈಕ ಪುತ್ರಿ. ಯರಗುಪ್ಪಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಚೈತ್ರಾ ಪ್ರಾಥಮಿಕ ಶಿಕ್ಷಣ ಮುಗಿಸಿ, ಹೈಸ್ಕೂಲ್ನ್ನು ಹುಬ್ಬಳ್ಳಿಯ ಸೆಂಟ್ ಫಾಲ್ ಹಾಗೂ ಪಿಯುಸಿಯನ್ನು ವಿದ್ಯಾನಿಕೇತನ ಕಾಲೇಜ್ನಲ್ಲಿ ಮುಗಿಸಿದ್ದಾಳೆ. ಪ್ರಸ್ತುತ ಉಕ್ರೇನ್ನ ‘ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ’ಯಲ್ಲಿ ಎಂಬಿಬಿಎಸ್ ಓದುತ್ತಿದ್ದಾಳೆ.
ಗುರುವಾರ ಈಕೆಯ ಹಾಸ್ಟೆಲ್ ಸನಿಹವೇ ಬಾಂಬ್ ಬ್ಲಾಸ್ಟ್ ಆಗಿದೆ ಎಂದು ಪಾಲಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಹೀಗಾಗಿ ಕುಟುಂಬದವರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದು ಕಣ್ಣೀರು ಹಾಕುತ್ತಿದ್ದಾರೆ. ಮಾರ್ಚ್ 2ಕ್ಕೆ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದಳು. ಈಗ ವಿಮಾನ ಹಾರಾಟ ರದ್ದಾಗಿದೆ. ಇನ್ನಾವಾಗ ವಿಮಾನ ಶುರುವಾಗುತ್ತದೊ ಎಂಬ ಭೀತಿ ಕಾಡುತ್ತಿದೆ.
ಇನ್ನು ಹುಬ್ಬಳ್ಳಿಯ ಕೇಶ್ವಾಪುರದ ಸುಶ್ಮಿತಾ ನಾಗೇಂದ್ರ ಕೂಡ ಎಂಬಿಬಿಎಸ್ ವಿದ್ಯಾರ್ಥಿನಿ. ಮೆಡಿಕಲ್ ವಿದ್ಯಾಾರ್ಥಿನಿಯಾದ ಇವರು ಉಕ್ರೇನ್ನ ಖಾರ್ಕೀವ್ನಲ್ಲಿ ಸಿಲುಕಿದ್ದಾರೆ. ಕಳೆದ ಮೂರು ವರ್ಷದಿಂದ ವಿ.ಎನ್. ಕರಾಝೈನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ.
ತಮ್ಮನ್ನೆಲ್ಲ ಇವತ್ತು ಬೆಳಗ್ಗೆ ‘23 ಸರ್ಪೇನಿಯಾ’ ಮೆಟ್ರೋ ರೈಲ್ವೆ ಸ್ಟೇಷನ್ನಲ್ಲಿ ಬಂದು ಉಳಿದುಕೊಳ್ಳಲು ತಿಳಿಸಿದ್ದಾರೆ. ಹೀಗಾಗಿ ಸಾವಿರಾರು ಜನರು ನಾವಿಲ್ಲಿ ಸೇರಿದ್ದೇವೆ. ಎಲ್ಲರಲ್ಲೂ ಭಯವಿದೆ. ಹೇಗಾದರೂ ಭಾರತಕ್ಕೆ ವಾಪಸ್ಸಾದರೆ ಸಾಕು ಎನ್ನಿಸುತ್ತಿದೆ ಎಂದರು.