ಇಎನ್ಎಲ್ ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದ ಸೇಂಟ್ ಝೇವಿಯರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆವರಣದಲ್ಲಿ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನದ ಅಂಗವಾಗಿ ಅಗ್ನಿಶಾಮಕ ಇಲಾಖೆಯಿಂದ ಆಕಸ್ಮಿಕ ಬೆಂಕಿ ನಂದಿಸುವ ಕುರಿತು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಬಗ್ಗೆ ಉಪನ್ಯಾಸ ನೀಡಿದ ಠಾಣಾಧಿಕಾರಿ ಎ.ವಿ.ಮಾನೆ, ಪ್ರಮುಖವಾಗಿ ಬೆಂಕಿಯ ಅನಾಹುತಗಳನ್ನು ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ.
1)ಕಟ್ಟಿಗೆ,
2)ತೈಲ ಬೆಂಕಿ,
3)ಅನಿಲ ಬೆಂಕಿ,
4)ಲೋಹ ಬೆಂಕಿ(ವಿದ್ಯುತ್ ಸೇರಿ),
ಇವುಗಳಲ್ಲಿ ಸದ್ಯ ಪ್ರತಿ ಮನೆಗಳಲ್ಲಿ ಎಲ್.ಪಿ.ಜಿ.ಗ್ಯಾಸ್ನ್ನು ಅಡುಗೆ ಅನಿಲವಾಗಿ ಉಪಯೋಗಿಸುತ್ತಿದ್ದಾರೆ. ಇದು ಪ್ರೊಪೇನ್ ಮತ್ತು ಬ್ಯೂಟೇನ್ ಒಳಗೊಂಡಿರುತ್ತದೆ. ಇವೆರಡೂ ವಾಸನೆ ರಹಿತವಾಗಿರುತ್ತವೆ. ಇದನ್ನು ಕಂಡು ಹಿಡಿಯಲು ನ್ಯೂರಿ ಕ್ಯಾಪ್ಟೇನ್ ಅಂಶವನ್ನು ಸೇರಿಸಿರುತ್ತಾರೆ. ಮನೆಯಲ್ಲಿ ಒಲೆ ಹಚ್ಚಿದ ಸಮಯದಲ್ಲಿ ತೈಲ ದೀಪ, ವಿದ್ಯುತ್ ಬಟನ್ ಹಚ್ಚಿ ಆರಿಸುವುದು, ಮಾಡಬಾರದು, ತುಂಬಿದ ಸಿಲಿಂಡರ್ ಮನೆಗೆ ಬಂದ ತಕ್ಷಣ ಮುಚ್ಚಳ ತೆಗೆದು ಒಂದೆರಡು ಹನಿ ನೀರು ಹಾಕಬೇಕು, ಗುಳ್ಳೆಗಳು ಬಂದರೆ ಗ್ಯಾಸ್ ಲೀಕೇಜ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಪ್ರತಿ 3 ವರ್ಷಕ್ಕೊಮ್ಮೆ ಪೈಪ್ ಚೆಂಜ್ ಮಾಡಬೇಕು, ಒಲೆಯು ಮೇಲಿನ ಮಟ್ಟಕ್ಕಿದ್ದು ಸಿಲಿಂಡರ್ ಕೆಳಗಿನ ಮಟ್ಟಕ್ಕಿರಬೇಕು. ನಂತರ ಶಾಲಾ ಆಟದ ಮೈದಾನದಲ್ಲಿ ಬೆಂಕಿ ನಂದಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಬೇಗೂರ ಗ್ರಾ.ಪಂ.ಅಧ್ಯಕ್ಷೆ ನಾಗವ್ವ ಜ ಅಂಗಡಿ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಸಿಸ್ಟರ ಲೀಡಿಯಾ, ಹೈಸ್ಕೂಲಿನ ಹಿರಿಯ ಶಿಕ್ಷಕರಾದ ವಿ.ಎಸ್.ರೇಶ್ಮಿ ಹಾಗೂ ಶಾಲೆಗಳ ಸಿಬ್ಬಂದಿ ವರ್ಗ, ಅಗ್ನಿಶಾಮಕದ ಸಿಬ್ಬಂದಿಯವರಾದ ಟಿ.ಕೆ.ರಾಠೋಡ್, ಉಮೇಶ ತೆಂಬದ, ಮಾರುತಿ ಹೈಬತ್ತಿ, ಆನಂದ ಕಾಜಗಾರ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಮ್ಯಾಕ್ಸಿ ಫರ್ನಾಂಡೀಸ್ ನಿರೂಪಿಸಿದರು.