ಇಎನ್ಎಲ್ ಅಣ್ಣಿಗೇರಿ: ಪ್ರಸಕ್ತ ಸಮಾಜದಲ್ಲಿ ಯುವ ಜನಾಂಗ ದುಷ್ಟವ್ಯಸನಗಳಿಗೆ ಬಲಿಪಶುವಾಗುತ್ತಿರೋದು ಬೇಸರದ ಸಂಗತಿ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ, ನಡೆ-ನುಡಿ, ದೃಢಸಂಕಲ್ಪ ತಾಳ್ಮೆ, ಮನಸ್ಸು ಸನ್ನದ್ದಗೊಳಿಸಿ ಜೀವನದಲ್ಲಿ ಯಶಸ್ಸಿನ ಗುರಿಯನ್ನು ಸಾಧಿಸುವತ್ತ ಸಾಗಬೇಕಿದೆ ಎಂದು ಪ್ರಾಚಾರ್ಯ ಡಾ.ರಾಥೋಡ್ ಮೋತಿಲಾಲ್ ಹೇಳಿದರು.
ಪಟ್ಟಣದ ಎಂ.ಬಿ.ಹಳ್ಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಆಚರಣೆ ಪ್ರಯುಕ್ತ ಆಯೋಜಿಸಿದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಂತರ ಮಾತನಾಡಿ, ಯುವ ಜನಾಂಗದಲ್ಲಿ ವ್ಯಕ್ತಿತ್ವ ವಿಕಸನವಾಗಬೇಕು. ಯುವಕರಲ್ಲಿ ಅಪಾರ ಶಕ್ತಿ ಸಾಮರ್ಥ್ಯಗಳಿವೆ. ಸರಿಯಾದ ಉಪಕ್ರಮದಲ್ಲಿ ಉಪಯೋಗಿಸುವ ಮನಸ್ಸು ಮಾಡಬೇಕು. ಯುವಕರು ಇಂದು ಪಡೆಯುತ್ತಿರುವ ಶಿಕ್ಷಣ ಅವರನ್ನು ನಿಂತ ನೆಲದಿಂದ ಪರಂಪರೆ ಸಂಸ್ಕೃತಿಗಳಿ0ದ ದೂರ ಸರಿಸುತ್ತಿದೆ. ಮಾನವೀಯ ಮೌಲ್ಯಗಳು ಪತನಗೊಳ್ಳುತ್ತಿವೆ. ವಿಜ್ಞಾನದ ಅವಿಷ್ಕಾರದಿಂದ ಭೌತಿಕ ಶ್ರೀಮಂತಿಕೆಯನ್ನು ನಾವು ಪಡೆದಿದ್ದೇವೆ. ಭೋಗ ಸುಖದ ಬೆನ್ನುಹತ್ತಿದ್ದೇವೆ. ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಕಳೆದುಕೊಂಡಿದ್ದೇವೆ. ಅತಿಯಾದ ಅಪೇಕ್ಷೆ ಮೋಹಗಳೇ ಕಾರಣ ಎಂದು ಸತ್ಪರುಷರು ಹೇಳುತ್ತಾರೆ ಎಂದರು. ಅಧ್ಯಾಪಕಿ ಭಾರತಿ ಎಚ್.ಮಣ್ಣೂರ ಮಾತನಾಡಿ,ಇಂದು ಕಂಪ್ಯೂಟರ್ ಮೊಬೈಲ್ಗಳಿಂದ ಕ್ರಾಂತಿಯೇ ಆಗಿದ್ದರೂ ಉತ್ಪಾದಿತವಾಗುತ್ತಿರುವ ಇ-ತಾಜ್ಯ ಒಂದು ಜಾಗತಿಕ ಸಮಸ್ಯೆಯಾಗಿದೆ. ವಿಜ್ಞಾನಿಗಳು ಮನುಷ್ಯನ ಅವಶ್ಯಕತೆಗಳನ್ನು ಪೂರೈಸುತ್ತ ಮೊಬೈಲ್ ಇಲ್ಲದೇ ಒಂದು ಕ್ಷಣವೂ ಬದುಕಲಾರದ ಸ್ಥಿತಿಗೆ ತಂದುಬಿಟ್ಟಿದ್ದಾರೆ. ಎನೆಲ್ಲಾ ಬಿಟ್ಟರು ಮೊಬೈಲ್ ಬಿಡಲಾರದಷ್ಟರ ಮಟ್ಟಿಗೆ ಮನುಷ್ಯರು ಬೆನ್ನುಹತ್ತಿದ್ದಾರೆ. ವಿಜ್ಞಾನವಾದದ ಪರಿಣಾಮವಾಗಿ ಭೌತಿಕ ಶ್ರೀಮಂತಿಕೆಯ ಬದುಕು ಸಾಗಿಸಬಹುದು. ಅದರೆ ಮನಸ್ಸಿನ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಭೋಗಿಸಲು ಶಕ್ತವಾದ ಶರೀರ-ಮನಸ್ಸುಗಳೇ ಇಲ್ಲದಿದ್ದರೆ ಆ ಭೌತಿಕ ಸುಖದಿಂದ ಎನು ಪ್ರಯೋಜನ?. ಅಂತಿಮ ಸತ್ಯದ ಸಾಕ್ಷಾತ್ಕಾರ, ಜ್ಞಾನಿಗಳಿಗೆ, ಅನುಭಾವಿಗಳಿಗೆ, ವಿಜ್ಞಾನಿಗಳಿಗೆ, ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಶೇಷ ತಹಶೀಲ್ದಾರ ಮಂಜುನಾಥ ದಾಸಪ್ಪನವರ ಮಾತನಾಡಿ ವಿಜ್ಞಾನಕ್ಕೆ ಅಧ್ಯಾತ್ಮದ ಊರುಗೋಲು ಬೇಕು. ಅದರಿಂದಲೇ ಜಗದ ಎಳ್ಗೆ ಸಾಧ್ಯವೆಂದು ಸತ್ಪರುಷರು ಪರಿಭಾವಿಸಿದ್ದರು. ತಂದೆ-ತಾಯಿ, ಗುರುಗಳಿಂದ ಉತ್ತಮ ಶಿಕ್ಷಣ ಸಂಸ್ಕಾರ ಕಲಿತು ಬದುಕಿನ ಸಾರ್ಥಕತೆ ಯಶಸ್ಸಿನ ರೂವಾರಿಗಳು ತಾವಾಗಬೇಕೆಂದರೇ ದುಷ್ಟವ್ಯಸನಗಳಿಂದ ಮುಕ್ತರಾಗಬೇಕೆಂದರು.
ಈ ಸಂದರ್ಭಧಲ್ಲಿ ರೆಡ್ ಕ್ರಾಸ್ ಘಟಕ ಮುಖ್ಯಸ್ಥ ಗೋರಖನಾಥ ಟಿಲೆ, ಅಣ್ಣಿಗೇರಿ ಪ್ರಾಥಮಿಕ ಬಿಎಚ್ಈಓ ಶೋಭಾ ಕುಲಕರ್ಣಿ, ಕೀರ್ತಿ ಕಳ್ಳೇರ, ವಿದ್ಯಾ ಹಡಗಲಿ, ಡಾ.ಫಕ್ಕೀರಪ್ಪ ಆನಿ, ಡಾ.ಕಿರಣಕುಮಾರ ರಾಯರ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು.