ಇಎನ್ಎಲ್ ಹುಬ್ಬಳ್ಳಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಡಿಪ್ಲೋಮಾ ವಿದ್ಯಾರ್ಥಿಯನ್ನು ಮಾತುಕತೆಗೆಂದು ಸುತಗಟ್ಟಿ ಕಾನ್ಕಾರ್ಡ್ ಲೇಔಟ್ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಲಾಗಿದೆ.
ಹಳೇಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ನಿವಾಸಿ ವಿನಯ ಹೇಮಂತ ಮೇಘರಾಜ (20) ಬುಧವಾರ ಕೊಲೆಯಾಗಿದ್ದಾನೆ.
ಪ್ರಕರಣ ಸಂಬಂಧ ಶರಣಾಗಿರುವ ಆರೋಪಿ ನವನಗರದ ರಾಘವೇಂದ್ರ ಫಕೀರಪ್ಪ ಕಮತರ ಎಂಬಾತನನ್ನು ಪೊಲೀಸರು ಬಂಧಿಸಿ ಸ್ಥಳ ಮಹಜರು ಪಡಿಸುವುದು ಸೇರಿ ಇತರೆ ವಿಚಾರಣೆಗೆ ಒಳಪಡಿಸಿದ್ದಾರೆ.
ಹತ್ಯೆಯಾದ ವಿನಯ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ಡಿಪ್ಲೋಮಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ತನ್ನ ಸಹಪಾಠಿ ಯುವತಿ ಜೊತೆಗೆ ಸ್ನೇಹದಿಂದ ಇದ್ದುದನ್ನು ನೋಡಿದ ಆರೋಪಿ ರಾಘವೇಂದ್ರ ತಾನು ಯುವತಿಯನ್ನು ಪ್ರೀತಿಸುತ್ತಿದ್ದು, ನೀನು ಮಧ್ಯೆ ಬರಬೇಡ ಎಂದು ಹೇಳಿದ್ದ ಎನ್ನಲಾಗಿದೆ. ಆದರೆ ಅವರ ಸ್ನೇಹ ಮುಂದುವರೆದಿದ್ದನ್ನು ಕಂಡು ಬುಧವಾರ ಸಂಜೆ ಯುವಕನ್ನು ಮಾತುಕತೆಗೆ ಎಂದು ಸಮೀಪದ ಬಿರಿಯಾನಿ ಅಂಗಡಿಯೊಬ್ಬನ ಬೈಕನ್ನು ತೆಗೆದುಕೊಂಡು ಸುತಗಟ್ಟಿ ಕಾನ್ಕಾರ್ಡ್ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದಾನೆ.
ಮೃತದೇಹವನ್ನು ಅಲ್ಲಿಯೆ ಬಿಟ್ಟುಬಂದ ರಾಘವೇಂದ್ರ, ವಿನಯ ಬಳಿಯಿದ್ದ ಮೊಬೈಲ್, ನೋಟ್ಬುಕ್ಗಳನ್ನು ಸುಟ್ಟುಹಾಕಿದ್ದಾನೆ ಎನ್ನಲಾಗಿದೆ. ಈ ನಡುವೆ ಯುವತಿ ವಿನಯ ಮೊಬೈಲ್ಗೆ ಮೂರ್ನಾಲ್ಕು ಬಾರಿ ಕರೆ ಮಾಡಿದ್ದಾಳೆ. ಆದರೆ ಕರೆ ಸ್ವೀಕರಿಸದ ಕಾರಣ ವಿನಯ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಮಗ ರಾತ್ರಿ ಕಳೆದರೂ ಮನೆಗೆ ಬಾರದ್ದರಿಂದ ಆತಂಕಕ್ಕೀಡಾದ ಪೋಷಕರು ನವನಗರ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ವಿನಯ ಮೃತದೇಹ ಪತ್ತೆಯಾಗಿದೆ. ಬಳಿಕ ರಾಘವೇಂದ್ರ ನವನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಯಲ್ಲಿ ಇತರರು ಪಾಲ್ಗೊoಡಿರುವ ವಿಚಾರ ಸೇರಿ ಇತರೆ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಮಹಾನಗರ ಪೊಲೀಸ್ ಆಯುಕ್ತ ಕೊಲೆ ಸಂಬಂಧ ಆರೋಪಿ ಬಂಧನವಾಗಿದೆ. ತನಿಖೆ ನಡೆಯುತ್ತಿದೆ ಎಂದು ಲಾಭೂರಾಮ ತಿಳಿಸಿದರು.
ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!