29 C
Hubli
ಮೇ 4, 2024
eNews Land
ಸುದ್ದಿ

ಬೆಂಬಲ ಬೆಲೆ ಯೋಜನೆ: ಬ್ಯಾಹಟ್ಟಿಯಲ್ಲಿ ಕಡಲೆ ಖರೀದಿ ಕೇಂದ್ರ ಉದ್ಘಾಟನೆ

ಕನಿಷ್ಠ ಬೆಂಬಲ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ 2 ಲಕ್ಷ 37 ಸಾವಿರ ಕೋಟಿ ರು.

ಇಎನ್ಎಲ್ ಧಾರವಾಡ:ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರವು ಒಟ್ಟು 2 ಲಕ್ಷ 37 ಸಾವಿರ ಕೋಟಿ ರೂ.ಹಣವನ್ನು ದೇಶದ ಎಲ್ಲ ರಾಜ್ಯಗಳಿಗೆ ನೀಡಿದೆ .ಧಾರವಾಡ ಜಿಲ್ಲೆಯಲ್ಲಿಯೂ 21 ಸ್ಥಳಗಳಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇಂದು ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ರೈತನ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸುವುದು,ಸಾಲ ಮನ್ನಾಕ್ಕಿಂತಲೂ ಅತ್ಯುತ್ತಮ ಹಾಗೂ ಅತ್ಯಗತ್ಯ ಕಾರ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯೂ ಕೂಡ ಇದಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿಯಾದ ಉತ್ಪನ್ನಗಳ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ವ್ಯವಸ್ಥೆ ಇದೆ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ನೋಂದಾಯಿತ 1 ಲಕ್ಷ 26 ಸಾವಿರ ರೈತರಿಗೆ ಈವರೆಗೆ 332 ಕೋಟಿ ರೂ .ಒದಗಿಸಲಾಗಿದೆ.ಆಹಾರ ಸಂಸ್ಕರಣೆ ಉದ್ದಿಮೆಗಳ ಸ್ಥಾಪನೆ,ರಾಸುಗಳ ಕಾಲು-ಬಾಯಿ ಬೇನೆ ರೋಗ ನಿವಾರಣೆಗೆ ಹಣ ಒದಗಿಸಲಾಗಿದೆ. ಬಿತ್ತನೆ ಬೀಜಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ವಿವಿಧ 1300 ತಳಿಗಳ ಬೀಜೋತ್ಪಾದನೆ ಮಾಡಲಾಗಿದೆ. ಜಲ ಜೀವನ ಮಿಷನ್ ಅಡಿ ಮನೆ ಮನೆಗೆ ನಳದ ನೀರು ಪೂರೈಸಲು ಬ್ಯಾಹಟ್ಟಿ ಗ್ರಾಮವೊಂದಕ್ಕೆ ಸುಮಾರು 6 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ.ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನವಲಗುಂದ ವಿಧಾಸಭಾ ಕ್ಷೇತ್ರಕ್ಕೆ 60 ಕೋಟಿ ರೂ.ನೀಡಲಾಗಿದೆ.ವಿವಿಧ ಉದ್ಯಮಗಳ‌ ಸಿಎಸ್‌ಆರ್ ನಿಧಿಯಡಿ ಜಿಲ್ಲೆಯ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ .ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಕೈಮಗ್ಗ,ಜವಳಿ ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ,ದಲ್ಲಾಳಿ,ಮಧ್ಯಮರ್ತಿಗಳ ಹಸ್ತಕ್ಷೇತ ತಪ್ಪಿಸಲು ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿ ಮಾಡಲಾಗುತ್ತಿದೆ. ಜನಪರ,ರೈತಪರ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಲ್ಲಿ ಮೊದಲು 7 ಕಡಲೆ ಖರೀದಿ ಕೇಂದ್ರಗಳಿರುತ್ತಿದ್ದವು,ನಂತರ 17 ಕ್ಕೆ ಹೆಚ್ಚಿಸಲಾಯಿತು. ಈ ಬಾರಿ 21 ಸ್ಥಳಗಳಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ.ಇದರಲ್ಲಿ ನವಲಗುಂದ ಮತಕ್ಷೇತ್ರವೊಂದರಲ್ಲಿಯೇ 13 ಕಡಲೆ ಖರೀದಿ ಕೇಂದ್ರಗಳು ಇರಲಿವೆ.ಕೇಂದ್ರ ಸ್ಥಾಪನೆಗೆ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆಸಕ್ತಿ ವಹಿಸಿದರೆ ಅಲ್ಲಿ ಪ್ರಾರಂಭಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಒತ್ತಾಸೆಯಾಗಿ ನಿಂತಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೈತರು ಹೊಲ ಮನೆಗಳಿಗೆ ತೆರಳಲು ಅನುಕೂಲವಾಗುವ ಬ್ಯಾಹಟ್ಟಿ-ಸುಳ್ಳ ರಸ್ತೆಯನ್ನು 6 ಕೋಟಿ 25 ಲಕ್ಷ ರೂ.ವೆಚ್ಚದಲ್ಲಿ, ಬ್ಯಾಹಟ್ಟಿ-ತಿರ್ಲಾಪುರ-ಹೆಬಸೂರ ರಸ್ತೆಯನ್ನು 5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ. ತುಪ್ಪರಿಹಳ್ಳ-ಬೆಣ್ಣೆಹಳ್ಳ ನೀರಿನಿಂದ ರೈತರ ಹೊಲಗಳಿಗೆ ನೀರಾವರಿ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಬ್ಯಾಹಟ್ಟಿ ಗ್ರಾ.ಪಂ.ಅಧ್ಯಕ್ಷ ಪರಮೇಶ್ವರ ಯಡ್ರಾವಿ,ಉಪಾಧ್ಯಕ್ಷೆ ಲಲಿತಾ ಬೆಟ್ಟದೂರ,ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಮಲ್ಲಪ್ಪ ಗುಡಿ,ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸಿ.ವಿ.ಪಾಟೀಲ ಮತ್ತಿತರರು ಇದ್ದರು.

Related posts

ಹಾನಗಲ್ ಉಪಚುನಾವಣೆ ಫಲಿತಾಂಶ?

eNEWS LAND Team

ಧಾರವಾಡಕ್ಕೂ ಒಕ್ಕರಿಸಿದ ಒಮಿಕ್ರಾನ್ ! ಡಿಸಿಯೇನೋ ಯಾರೂ ಹೆದ್ರಬೇಡಿ ಅಂತಿದಾರೆ..! ಆದ್ರೆ??

eNewsLand Team

ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್

eNEWS LAND Team