ಇಎನ್ಎಲ್ ಅಣ್ಣಿಗೇರಿ:
ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿರುವ ಬೆನ್ನಲ್ಲೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಲೆಕ್ಕಾಚಾರದಲ್ಲಿ ಕೈ-ಕಮಲ ನಾಯಕರು ಪ್ರಚಾರಕ್ಕೆ ತೆರಳುತ್ತಿದ್ದು, ವಾರ್ಡುಗಳಲ್ಲಿ ಮೂಲಸೌಲಭ್ಯದಿಂದ ವಂಚಿತಗೊಂಡ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆ ಬಾಗಿಲಿಗೆ ಬಂದವರಿಗೆ ಮಂಗಳಾರತಿ ಮಾಡಿ ಕಳಿಸುತ್ತಿದ್ದಾರೆ!!
ಕಳೆದ ೩ ವರ್ಷಗಳಿಂದ ಪುರಸಭೆ ಚುನಾವಣೆ ಜರುಗದಿರುವ ಸಂದರ್ಭದಲ್ಲಿ ನಾಗರಿಕರು ಅನುಭವಿಸುವಾಗ ಯಾವೊಬ್ಬ ನಾಯಕರು, ಪಕ್ಷದ ಮುಖಂಡರು, ಮಂತ್ರಿಗಳು, ಶಾಸಕರು ಬರಲಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ಈಗ ನಮ್ಮ ಸರ್ಕಾರ ಹಂಗ, ಹಿಂಗ ಅಂತಾ ಹೇಳ್ತಾ ಬೊಬ್ಬೆ ಹೊಡೆಯುತ್ತಿದ್ದಾರೆ. ಇವರಗೇನು ಒಂದಿಷ್ಟಾದರೂ ನಾಚಿಕೆ ಐತೇನ್ರೀ ಎಂಬ ಸಂಕಟ ಇವರೆಂತಹ ನಾಯಕರು, ಜನಪ್ರತಿನಿಧಿಗಳೆಂದು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಳೆದ 2 ವರ್ಷಗಳಿಂದ ಕೋವಿಡ್-19 ಪಿಡುಗು ಬಂದಾಗ ಯಾರೂ ನೆರವಿಗೆ ಬರಲಿಲ್ಲ. ಕುಡಿಯುವ ನೀರು ಸಮರ್ಪಕವಾಗಿ ಬರುವುದಿಲ್ಲ . ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಕೇಳೋರಿಲ್ಲ, ನೋಡೋರಿಲ್ಲ. ಬೀದಿ ಲೈಟಿಲ್ಲ,ತಗ್ಗು ದಿನ್ನುಗಳ ರಸ್ತೆಗಳಲ್ಲಂತೂ ಸಾರ್ವಜನಿಕರು ಸಂಚರಿಸುವುದು ಕಷ್ಟ.ಅತಿವೃಷ್ಟಿ ಕಾರಣಕ್ಕೆ ಪಟ್ಟಣದ ಸುತ್ತಲು ಅಪಾರ ಹಾನಿಯಾಗಿದೆ. ಸಾಕಷ್ಟು ವಾರ್ಡುಗಳಲ್ಲಿ ಅಗತ್ಯ ಸೌಲಭ್ಯ ಸಿಗುತ್ತಿಲ್ಲ.
ಆದರೆ ಇಷ್ಟು ದಿನಗಳ ಕಾಲ ಜನತೆಯ ಕಷ್ಟ ಏನೆಂದು ಕೇಳಲು ಬಾರದವರು ಈಗ ಚುನಾವಣೆ ನಾಳೆ ಬೆಳಗ್ಗೆ ಇದೆ ಎಂದಾದ ಮನೆ ಬಾಗಿಲು ತಟ್ಟಿ ಮತ ಕೇಳುತ್ತಿದ್ದಾರೆ. ತಾವಾಗೇ ಮಾತನಾಡಿಸುತ್ತಿದ್ದಾರೆ ಎಂದು ಜನ ನೇರವಾಗಿ ದೂರುತ್ತಿದ್ದಾರೆ.