ಇಎನ್ಎಲ್ ಧಾರವಾಡ: ಸಾಲಬಾಧೆಗೆ ಬೇಸತ್ತು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ನಡೆದಿದೆ.
ಗಂಗಪ್ಪ ಹನಮಪ್ಪ ಹೊರಕೇರಿ (55) ಮೃತ ರೈತ. ಇಚರು ತಮ್ಮ ಜಮೀನಿನ ಮೇಲೆ ನಲವಡಿ ಗ್ರಾಮದ ಕೆ.ವ್ಹಿ.ಜಿ ಬ್ಯಾಂಕಿನಲ್ಲಿ 2 ಲಕ್ಷ ರುಪಾಯಿ ಬೆಳೆಸಾಲ ಮಾಡಿದ್ದರು. ಜತೆಗೆ ಊರಲ್ಲಿ ಅಂದಾಜು 2 ಲಕ್ಷ ರುಪಾಯಿ ಕೈಗಡ ಸಾಲ ಮಾಡಿದ್ದರು.
ಈಚೆಗೆ ಅಕಾಲಿಕ ಮಳೆಯಿಂದಾಗಿ ಹೊಲ ಬೆಳೆಯದೇ ಇದ್ದುದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂಬ ಕೊರಗಿನಲ್ಲಿ ತಮ್ಮ ಜಮೀನಿನಲ್ಲಿ ಯಾವುದೋ ವಿಷಕಾರಕ ಎಣ್ಣೆ ಸೇವಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟರು.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.