ಇಎನ್ಎಲ್ ಕಲಘಟಗಿ: ತಾಲೂಕಿನ ಬೆಲವಂತರ ಗ್ರಾಮದ ಬೆಲವಂತರ ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ 09 ವರ್ಷಗಳಿಂದ ಸಹಶಿಕ್ಷಕ ಹಾಗೂ ಅಲ್ಪಾವಧಿ ಪ್ರಭಾರೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕ ಪ್ರಶಾಂತ ಉಕ್ಕುಂದ ತಮ್ಮ ಬೀಳ್ಕೊಡು ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಶಿಕ್ಷಕರು ನಾನೆಂಬ ಅಹಂಭಾವವನ್ನು ಮರೆತು, ಮಕ್ಕಳೊಂದಿಗೆ ಬೆರೆತು, ನಯ-ವಿನಯಗಳ ಸಾಕಾರದಿಂದ ಮಕ್ಕಳಿಗೆ ರಾಷ್ಟ್ರಾಭಿಮಾನ-ದೇಶ ರಕ್ಷಣೆಯ ಶಿಕ್ಷಣ ನೀಡಿ, ರಾಷ್ಟ್ರಕಂಡ ಪ್ರಬುದ್ಧ ನಾಯಕರಾಗುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು. ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿ, ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಗುರು-ಶಿಷ್ಯರ ಸಂಬಂಧ ದೂರವಾಗುತ್ತಿದೆ. ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವ ತರ್ಕಗಳ ನಡುವೆಯೇ, ಧಾರವಾಡ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುವ ವೇಳೆ ವಿದ್ಯಾರ್ಥಿಗಳು ಬಿಕ್ಕಿ-ಬಿಕ್ಕಿ ಅತ್ತಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಂತಿತ್ತು ಎಂದು
ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ.ಕೆ.ಎಫ್.ಹೇಳಿದರು.
ಬೀಳ್ಕೊಡು ಸಮಾರಂಭ ಮುಗಿದ ತಕ್ಷಣ ಶಿಕ್ಷಕ ಪ್ರಶಾಂತ ಉಕ್ಕುಂದ ಇನ್ನೇನು ಹೊರಡುಬೇಕು ಅನ್ನುವಷ್ಟ್ರಲ್ಲಿ ಅವರನ್ನು ಸುತ್ತುವರಿದ ವಿದ್ಯಾರ್ಥಿಗಳು ಹೋಗಬೇಡಿ ಸರ್ ಎಂದು ವಿನಂತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಇದ್ದ ಪ್ರೀತಿ ಕಣ್ಣೀರಾಗಿ ಹೊರಬಂದಿದೆ. ಉಮ್ಮಳಿಸಿ ಅಳುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿ ಪ್ರಶಾಂತ ಉಕ್ಕುಂದ ಮೇಷ್ಟ್ರ ಕಣ್ಣುಗಳು ಕೂಡ ತೇವಗೊಂಡು, ಕಪಾಳ ಮೇಲೆ ನೀರು ಇಳಿದಿದೆ. ಊರಿನವರು ಕೂಡ ದುಃಖದ ಕಟ್ಟೆಯೂ ಒಡೆದು ಹೋಗಿತ್ತು. ಈ ಹೃದಯಸ್ಪರ್ಶಿ ಬೀಳ್ಕೋಡುಗೆ ಸಮಾರಂಭ ಹಾಗೂ ವಿದ್ಯಾರ್ಥಿಗಳ ಭಾವನಾತ್ಮಕ ಸ್ಪಂದನೆ ಊರಿನವರು ಮತ್ತು ವಿದ್ಯಾರ್ಥಿಗಳ ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿತ್ತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಾಧ್ಯಾಪಕರಾದ ಕೆ.ಜಿ.ನಾಯಕರಿಗೆ ಸನ್ಮಾನಿಸಲಾಯಿತು. ಗ್ರಾಮಸ್ಥರು, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಅವರನ್ನು ಸನ್ಮಾನಿಸಿ-ಗೌರವಿಸಿದರು. ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ.ಕೆ.ಎಫ್, ನಿವೃತ್ತ ಮುಖ್ಯಾಧ್ಯಾಪಕ ಕೆ.ಜಿ.ನಾಯಕ, ಎಸ್.ಎನ್.ಮರೆಪ್ಪಗೌಡ್ರ, ಶಿವಪ್ಪ ಬೆಟಗೇರಿ, ಸೋಮರೆಡ್ಡಿ ರಡ್ಡೆರ್, ಮಲ್ಲಿಕಾರ್ಜುನ ಕರ್ಲಟ್ಟಿ, ಶೇಖಪ್ಪ ದಾಸ್ತಿಕೊಪ್ಪ, ಬಸವಣ್ಣೆಪ್ಪ ಮುತ್ತಗಿ, ಚನ್ನಪ್ಪ ಹುಲಮನಿ, ದೊಡ್ಡೆಶಪ್ಪ ಕರ್ಲಟ್ಟಿ, ಮಲ್ಲಯ್ಯಾ ಹಿರೇಮಠ, ಲಕ್ಷ್ಮಣ ಆಚಗೊಂಡ, ಮಂಜುನಾಥ ಬಸನಕೊಪ್ಪ, ಕಲ್ಲಪ್ಪ ಕರ್ಲಟ್ಟಿ, ಚನ್ನಪ್ಪ ಬೆಳಗಲಿ, ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು.