ಇಎನ್ಎಲ್ ಧಾರವಾಡ: ಧಾರವಾಡದ ಕೆ.ಸಿ.ಪಾರ್ಕ್ ಹತ್ತಿರ ವಾರದ ಎಲ್ಲ ಏಳು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನಗಳಲ್ಲಿ ಕಾರ್ಯ ನಿರ್ವಹಣೆಯಾಗುತ್ತಿರುವ ಆಧಾರ್_ಸೇವಾ_ಕೇಂದ್ರ ಆರಂಭವಾಗಿದೆ.
ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯ ಚಟುವಟಿಕೆಗಳನ್ನು ಕೆಂದ್ರ ಸಚಿವ ಪ್ರಲ್ಹಾದ ಜೋಶಿಯವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಬೃಹತ್ ಮೆಟ್ರೊ ನಗರಗಳಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಆಧಾರ್ ಸೇವಾ ಕೇಂದ್ರಗಳ ಸ್ಥಾಪಿಸುವ ನೀತಿ ರಾಷ್ಟ್ರಮಟ್ಟದಲ್ಲಿ ಇತ್ತು. ನನ್ನ ವಿಶೇಷ ಪ್ರಯತ್ನದಿಂದಾಗಿ ನಾನ್ ಮೆಟ್ರೋ ನಗರಗಳಾಗಿರುವ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಎರಡು ಪ್ರತ್ಯೇಕ ಪೂರ್ಣ ಪ್ರಮಾಣದ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಬಳಿಕ ಇದರ ಪ್ರಯೋಜನ ಉಳಿದ ನಗರಗಳಿಗೂ ಲಭ್ಯವಾಗಿದೆ. ಇಲ್ಲಿ ಪ್ರತಿನಿತ್ಯ ಸುಮಾರು 500 ಜನರಿಗೆ ಆಧಾರ್ ಅಪ್ಡೇಟ್ ಹೊಸ ಆಧಾರ್ ಕಾರ್ಡ್ ವಿತರಣೆಗೆ ಅವಕಾಶವಿದೆ ಎಂದೂ ಹೇಳಿದರು.
ಆಧಾರ್ ನೋಂದಣಿ ಹಾಗೂ ನವೀಕರಣಕ್ಕಾಗಿ ಬಂದಿದ್ದ ಸಾರ್ವಜನಿಕರು ಈ ಕೇಂದ್ರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಸುರೇಶ ಬೇದ್ರೆ, ಮಂಜುನಾಥ ಬಟ್ಟೆಣ್ಣವರ, ಜ್ಯೋತಿ ಪಾಟೀಲ, ಶಿವು ಹಿರೇಮಠ, ವಿಜಯಾನಂದಶೆಟ್ಟಿ, ಮೋಹನ ರಾಮದುರ್ಗ , ಆಧಾರ್ ಕೇಂದ್ರದ ವ್ಯವಸ್ಥಾಪಕಿ ಸ್ವಾತಿ ಕೊಟಬಾಗಿ ಮತ್ತಿತರರು ಉಪಸ್ಥಿತರಿದ್ದರು.