ಇಎನ್ಎಲ್ ಧಾರವಾಡ: ವಿಶ್ವದ ಅತ್ಯಂತ ಉದ್ದದ ರೈಲ್ವೇ ಪ್ಲಾಟ್ ಫಾರಂ ಖ್ಯಾತಿಯ ನೈಋತ್ಯ ರೈಲ್ವೆ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಲ್ಲಿ ಭಾನುವಾರ ಮೊದಲ ಬಾರಿ ಎರಡು ಎಲೆಕ್ಟ್ರಾನಿಕ್ ಲೋಕೋಮೋಟಿವ್ ರೈಲು ಸಂಚರಿಸುವ ಮೂಲಕ ಹೊಸ ಅಧ್ಯಾಯ ಆರಂಭವಾಗಿದೆ.
ಮೈಸೂರು- ಹುಬ್ಬಳ್ಳಿ ನಡುವಿನ ಹಂಪಿ ಎಕ್ಸಪ್ರೆಸ್ (16592) ರೈಲು ಎಸ್ಎಸ್ಎಸ್ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿದ್ಯುತ್ ಲೋಕೋಮೋಟಿವ್ ರೈಲು ಎನಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಯಿತು. ಇನ್ನು, ವಿಜಯವಾಡ-ಹುಬ್ಬಳ್ಳಿ ನಡುವಿನ ಅಮರಾವತಿ ಎಕ್ಸಪ್ರೆಸ್ (17225) ಇ ಲೋಕೋಮೋಟಿವ್ ರೈಲು ಕೂಡ ಭಾನುವಾರ ಎಸ್ಎಸ್ಎಸ್ ನಿಲ್ದಾಣ ಪ್ರವೇಶಿಸಿದೆ.
ಇಲ್ಲಿವರೆಗೆ ಹೊಸಪೇಟೆವರೆಗೆ ವಿದ್ಯುತ್ ಮಾರ್ಗವಿದ್ದ ಕಾರಣ ಅಲ್ಲಿ ನಿಲುಗಡೆ ಮಾಡಿ ಇ ಲೋಕೋಮೋಟಿವ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗುತ್ತಿತ್ತು. ಇದೀಗ ಹೊಸಪೇಟೆಯಿಂದ ಹುಬ್ಬಳ್ಳಿವರೆಗೂ ವಿದ್ಯುತ್ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್ ಚಾಲಿತ ರೈಲು ಆಗಮಿಸಿದೆ.
ಈ ಹಿಂದೆ ಗುಂತಕಲ್ನಲ್ಲಿ ಅಮರಾವತಿ ಎಕ್ಸ್ಪ್ರೆಸ್ ರೈಲನ್ನು ನಿಲುಗಡೆ ಮಾಡಿ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗುತ್ತಿತ್ತು.
ಡೀಸೆಲ್ನಿಂದ ಉಂಟಾಗುತ್ತಿದ್ದ ವಾಯು ಮಾಲಿನ್ಯವನ್ನು ಇ ಲೋಕೋಮೋಟಿವ್ ತಡೆಯಲಿದೆ. ಜತೆಗೆ ಎಂಜಿನ್ ಬದಲಿಸಲು 15 ನಿಮಿಷ ಸಮಯ ಉಳಿತಾಯವಾಗುತ್ತಿದೆ. ರೈಲ್ವೆ ಪ್ರಯಾಣ ಆರಂಭದಿಂದ ಅಂತ್ಯದವರೆಗೆ ಇ ಲೋಕೋಮೋಟಿವ್ ರೈಲು ಸಂಚಾರ ಆಗಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಪಿ ಆರ್ ಒ ಅನೀಶ ಹೆಗಡೆ ತಿಳಿಸಿದ್ದಾರೆ.