ಇಎನ್ಎಲ್ ಡೆಸ್ಕ್: “ಭಜರಂಗದಳ ನಿಷೇಧ” ಎಂಬ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸಿಡಿದೆದ್ದಿರುವ ವಿಶ್ವ ಹಿಂದೂ ಪರಿಷತ್ ಭಜರಂಗದಳವು ಗುರುವಾರ ಸಂಜೆ 7ಗಂಟೆಗೆ ರಾಜ್ಯಾದ್ಯಂತ ರಾಮ ಹಾಗೂ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣದ ಅಭಿಯಾನ ನಡೆಸುವುದಾಗಿ ಹೇಳಿದೆ. ಅಲ್ಲದೇ ಚುನಾವಣೆವರೆಗೆ ಮನೆಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ನೀಡದಂತೆ ಜಾಗೃತಿ ಮೂಡಿಸುವುದಾಗಿ ತಿಳಿಸಿದೆ.
ದೇಶದ್ರೋಹಿ ಪಿಎಫ್ಐ ಸಂಘಟನೆಯ ಜೊತೆಗೆ ಭಜರಂಗದಳವನ್ನು ಒಂದೇ ತಕ್ಕಡಿಯಲ್ಲಿಟ್ಟಿರುವುದು ಕಾಂಗ್ರೆಸ್ ಮುಖಂಡರ ಮನಸ್ಥಿತಿಯನ್ನು ತೋರುತ್ತದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳನ್ನು ಮತಕ್ಕಾಗಿ ಓಲೈಸಿಕೊಳ್ಳಲು ಆ ಪಕ್ಷ ಹಿಂದೂಗಳನ್ನು ದಮನಿಸಲು ಮುಂದಾಗಿದೆ. ಇದನ್ನು ಯಾವುದೇ ಕಾರಣಕ್ಕಾಗಿ ಸಹಿಸಲ್ಲ ಎಂದು ಭಜರಂಗದಳ ಮುಖಂಡರು ಕಿಡಿ ಕಾರಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ವಿಭಾಗದ ಸಂಯೋಜಕ ಗೋವರ್ಧನ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ ನಾವು ಅವರನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ. ಆ ಪಕ್ಷಕ್ಕೆ ಮತದಾನ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ತಕ್ಷಣ ತಮ್ಮ ಪ್ರಣಾಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಇಲ್ಲವೇ ತಾಕತ್ತಿದ್ದರೆ ತಾವು ಕೈಗೊಳ್ಳುವ ಎಲ್ಲ ಚುನಾವಣಾ ಭಾಷಣದಲ್ಲಿ ಬಹಿರಂಗವಾಗಿ ‘ ಭಜರಂಗದಳ ನಿಷೇಧಿಸುತ್ತೇವೆ’ ಎಂದು ಘೋಷಿಸಲಿ. ಇದರ ಪರಿಣಾಮವಾಗಿ ಮೇ 13ರಂದು ರಾಜ್ಯದ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದರು.