ಇಎನ್ಎಲ್ ಬೆಳಗಾವಿ, ಸುವರ್ಣಸೌಧ: ರಾಜ್ಯ ಸಾರಿಗೆ ಇಲಾಖೆಯಲ್ಲಿ 1565 ಹುದ್ದೆಗಳು ಖಾಲಿ ಉಳಿದಿವೆ. ಬಡ್ತಿ ಹಾಗೂ ನೇರ ನೇಮಕಾತಿ ಮೂಲಕ ತುಂಬಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಕೆ. ರಾಠೋಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು ನೇರ ನೇಮಕಾತಿ ಮೂಲಕ 150 ವಾಹನ ನಿರೀಕ್ಷಕರ ಪಟ್ಟಿಯನ್ನು ಲೋಕಸೇವಾ ಆಯೋಗದಿಂದ ನಿರೀಕ್ಷಿಸಲಾಗುತ್ತಿದೆ. ಉಳಿದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೆ ಪರಿಶೀಲನೆ ನಡೆಸಲಾಗುತ್ತಿದೆ. ಅನುಕಂಪ ಆಧಾರಿತ ಹುದ್ದೆಗಳನ್ನು ನೇರ ನೇಮಕಾತಿ ಅಡಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಡ್ತಿ ಮೀಸಲಿರುವ ಹುದ್ದೆಗಳ ಪೈಕಿ ಆಯಾ ವೃಂದದಲ್ಲಿ ಅರ್ಹತೆಯಿರುವವರನ್ನು ಪರಿಗಣಿಸಿ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.