26.8 C
Hubli
ಏಪ್ರಿಲ್ 20, 2024
eNews Land
ರಾಜ್ಯ

ಯಾವ ದೇಶಕ್ಕೆ ಸಂಸ್ಕೃತಿ ಇದೆಯೋ ಆ ದೇಶಕ್ಕೆ ಭವಿಷ್ಯ ಇದೆ: ಮುಖ್ಯಮಂತ್ರಿ ಬೊಮ್ಮಾಯಿ‌

ಸ್ವದೇಶಿ ಮೇಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಭಾಗಿ

ಇಎನ್ಎಲ್ ಬೆಂಗಳೂರು:

ವಿದೇಶಿ ವ್ಯಾಮೋಹದಲ್ಲಿ ವಿದೇಶಿ ವಸ್ತುಗಳನ್ನು ಖರದೀಸಿ ನಾವು ನಮ್ಮ ಸಂಸ್ಕೃತಿಯನ್ನು ಮತೆಯುತ್ತಿದ್ದೇವೆ. ಯಾವ ದೇಶಕ್ಕೆ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

ಇಂದು ದಾಸರಹಳ್ಳಿಯ ಎಂಇಐ ಲೇಔಟ್‍ನ ಆಟದ ಮೈದಾನದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಲಾಗಿದ್ದ ಸ್ವದೇಶಿ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವೆಲ್ಲರೂ ಅಭಿಮಾನ ಪಡುವ ಸಂಸ್ಥೆ ಸ್ವದೇಶಿ ಜಾಗರಣ ಮಂಚ್. ಜಗತ್ತಿನಲ್ಲಿ, ದೇಶದಲ್ಲಿ ಏನೇ ನಡೆದರೂ, ಅವರು ಸ್ವದೇಶಿ ಮಂತ್ರ ಜಪಿಸುತ್ತಾರೆ. ಕಳೆದ ಬಾರಿ ಜಯನಗರದಲ್ಲಿ‌ ಈ ಮೇಳ ಮಾಡಿದ್ದರು. ಈ ಬಾರಿ ದಾಸರಹಳ್ಳಿಯಲ್ಲಿ ಮಾಡಲಾಗುತ್ತಿದೆ. ಜನರಿಗೆ ಸ್ವದೇಶಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ನಾಗರಿಕತೆ ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಭಾರತದಲ್ಲಿಯೂ ನಾಗರಿಕತೆ ಬೆಳೆಯುತ್ತಿದೆ. ಆದರೆ, ನಾಗರಿಕತೆ ಮತ್ತು ಸಾಂಸ್ಕೃತಿಕತೆಯ ಬಗ್ಗೆ ವ್ಯತ್ಯಾಸವಿದೆ. ಅದು ಬಹಳ ಜನರಿಗೆ ಗೊತ್ತಿಲ್ಲ. ಈಗ ದೊಡ್ಡ ಮನೆಗಳು, ಕಾರುಗಳು, ವಿಮಾನ ನಿಲ್ದಾಣಗಳು, ವಿದೇಶಿ ಕಾರುಗಳು ಬರುತ್ತಿವೆ. ವಿಮಾನ, ಹೆಲಿಕ್ಯಾಪ್ಟರ್ ಎಲ್ಲವೂ ಬಂದಿವೆ. ನಮ್ಮ ಬಳಿ ಏನಿದೆಯೋ ಅದು ನಾಗರಿಕತೆ. ನಾವೇನಾಗಿದ್ದೇವೆ ಅನ್ನುವುದು ಸಂಸ್ಕೃತಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ವಿದೇಶಿ ವ್ಯಾಮೋಹದಲ್ಲಿ ವಿದೇಶಿ ವಸ್ತುಗಳನ್ನು ಖರೀದಿಸಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಹಿರಿಯರು ಬೀಸುವ ಕಲ್ಲು ಬೀಸುತ್ತ ತಮ್ಮ ತವರುಮನೆ ನೆನೆಯುತ್ತ ಹಾಡು ಹೇಳುತ್ತಿದ್ದರು‌. ಹಾಡು ಕೇಳಿದರೆ ಕಣ್ಣಲ್ಲಿ ನೀರು ಬರುತ್ತಿತ್ತು. ಒಣಕೆ ಇತ್ತು, ಅದು ಹೋಯಿತು. ಎತ್ತುಗಳು ಇದ್ದವು. ರೈತ ಅವುಗಳನ್ನು ಹೂಡುತ್ತ ಹಾಡುಗಳನ್ನು ಹೇಳುತ್ತಿದ್ದ. ಯಾವ ದೇಶಕ್ಕೆ ಅಂತಹ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ. ಆಧುನಿಕ ಕಾಲದಲ್ಲಿ ನಮ್ಮ ದೇಶದ ವಸ್ತುಗಳನ್ನು ಉತ್ಪಾದನೆ ಮಾಡಿ, ಜನರಿಗೆ ತಲುಪಿಸುವ ಕೆಲಸವನ್ನು ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ. ಅವರಿಗೆ ಸಿಎಂ ಬೊಮ್ಮಾಯಿ‌ ಅಭಿನಂದನೆ ತಿಳಿಸಿದರು.

1990 ರಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದ ಮೇಲೆ ನಾವು ಅಂತಃಕರಣ ಮರೆತಿದ್ದೇವೆ. ಸ್ವದೇಶಿ ಜಾಗರಣ ಮಂಚ್ ಅಂತಃಕರಣವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ನಾವು ಸುಮಾರು 70-80 ವರ್ಷಗಳಿಂದ ಬಳಸಲಾಗುತ್ತಿರುವ ಟೂತ್ ಪೇಸ್ಟ್ ಕೂಡ ವಿದೇಶದ್ದು. ಈಗ ಪತಂಜಲಿ ಬರುತ್ತಿದ್ದು, ಈ ಸಮಯದಲ್ಲಿ ಯಾವುದು ಅಸಾಧ್ಯವಲ್ಲ ಎಂದರು.

*ಪ್ರಧಾನಿ ಮೋದಿಯವರ ಶ್ರಮದಿಂದ ಸ್ವದೇಶಿ ಉತ್ಪಾದನೆ ಹೆಚ್ಚಳ*

ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದ ಸ್ವದೇಶಿ ಜಾಗೃತಿ ಉತ್ಪಾದನೆ ಹೆಚ್ಚುತ್ತಿದೆ. ಯುನಿಲಿವರ್ ಕಂಪನಿಗೆ ನಿರ್ಮಾಪೌಡರ್ ಕೌಂಟರ್ ಆಗಿ ಬೆಳೆಯಿತು. ಅತಿ ಹೆಚ್ಚು ಗಾರ್ಮೆಂಟ್ ಉತ್ಪನ್ನವನ್ನು ಚೀನಾಗಿಂತ ಹೆಚ್ಚು ರಪ್ತು ಮಾಡುತ್ತಿರುವುದು ಭಾರತ.‌ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ಮೋದಿಯವರು ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವ ಯೋಜನೆ ಜಾರಿಗೆ ತಂದಿದ್ದಾರೆ‌. ಒಂದು ವರ್ಷದಲ್ಲಿ ಒಂದೂವರೆ ಲಕ್ಷ ಜನರಿಗೆ ಸೌಲಭ್ಯ ನೀಡಲಾಗಿದೆ ಎಂದರು.

*ಭಾರತದಲ್ಲಿ ಕೊರೋನಾ ಲಸಿಕೆ ಉತ್ಪಾದನೆ*

ಮಹಾಮಾರಿ ಕೊರೋನಾಗೆ ಭಾರತದಲ್ಲಿಯೇ ಲಸಿಕೆ ಉತ್ಪಾದನೆ ಮಾಡಲಾಯಿತು. ದೇಶ-ವಿದೇಶಗಳಿಗೆ ಕೊರೋನಾ ಲಸಿಕೆ ವಿತರಣೆ ಮಾಡಲಾಯಿತು. ನಮ್ಮ ದೇಶದ ಜನರಿಗೆ ಉಚಿತ ಲಸಿಕೆ ನೀಡುವುದಲ್ಲದೆ, ಬೂಸ್ಟರ್ ಡೋಸ್ ನೀಡಲಾಗಿದೆ ಎಂದರು.

*ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಲಿ*

ಜನರು ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚು ಮಾಡಬೇಕು‌. ಕೇವಲ ಮೇಳದಲ್ಲಿ ಖರೀದಿ ಮಾಡುವುದಲ್ಲದೇ, ದಿನನಿತ್ಯ ಬಳಕೆ ಮಾಡಬೇಕು. ಮಹಿಳೆಯರಿಗೆ ಸ್ತ್ರೀ ಶಕ್ತಿ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ ಮೂಲಕ ಐದು ಲಕ್ಷದ ವರೆಗೆ ಸಾಲ ನೀಡಲಾಗುತ್ತಿದೆ. ವೃತ್ತಿ ಆಧಾರಿತ ಕೆಲಸ ಮಾಡುವವರಿಗೆ ಕಾಯಕ ಯೋಜನೆ ಮೂಲಕ ಎಲ್ಲ ಸಮುದಾಯಗಳಿಗೆ ಸಹಾಯ ಮಾಡಲಾಗುತ್ತಿದೆ. ಮೊದಲು ದುಡ್ಡೆ ದೊಡ್ಡಪ್ಪ ಅಂತ ಇತ್ತು ಈಗ ದುಡಿಮೆಯೇ ದೊಡ್ಡಪ್ಪ. ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಎಲ್ಲರೂ ಸ್ವದೇಶಿ ಉತ್ಪನ್ನಗಳ ನ್ನು ಬಳಕೆ ಮಾಡೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಕರೆ ನೀಡಿದರು.

Related posts

ಇಂದಿನಿಂದ ಉಚಿತ ವಿದ್ಯುತ್‌ಗೆ ಅರ್ಜಿ ‘ಗೃಹಜ್ಯೋತಿ’ ಯೋಜನೆ ಅರ್ಜಿ ಸ್ವೀಕಾರ ಆರಂಭ… ಅರ್ಜಿ ಹಾಕುವುದು ಹೇಗೆ ನೋಡಿ

eNEWS LAND Team

ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿಸಿದ ಬಸ್ ಚಾಲಕ

eNEWS LAND Team

ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಲಾರ್ಪಣೆ

eNEWS LAND Team