ಇಎನ್ಎಲ್ ಹಾವೇರಿ:
ಸರ್ವಜ್ಞನ ಜನ್ಮಭೂಮಿ ಅಬಲೂರಿನಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಸಂರಕ್ಷಣೆಗೆ ರೂ.2 ಕೋಟಿ ಹಾಗೂ ಸಭಾಭವನ ನಿರ್ಮಾಣಕ್ಕೆ ರೂ.75 ಲಕ್ಷ ಮಂಜೂರು ಮಾಡಲಾಗುವುದು ಎಂದು ಜೀವಿಶಾಸ್ತ್ರ ಮತ್ತು ಪರಿಸರ, ಪ್ರವಾಸೋದ್ಯಮ ಸಚಿವ ಸಚಿವರಾದ ಆನಂದಸಿಂಗ್ ಅವರು ಹೇಳಿದರು.
ಹಿರೇಕೆರೂರು ಮತಕ್ಷೇತ್ರದ ಅಬಲೂರಿನಲ್ಲಿ ರವಿವಾರ ಶ್ರೀ ಸೋಮೇಶ್ವರ ದೇವಸ್ಥಾನದ ಸಂರಕ್ಷಣೆ ಹಾಗೂ ಇತರೆ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿ ಮಾತನಾಡಿದ ಅವರು, ಹಿರೇಕೆರೂರು ಪಟ್ಟಣದ ಕೆರೆಯಲ್ಲಿ ಸರ್ವಜ್ಞಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಯಾನವನ ನಿರ್ಮಾಣಕ್ಕೆ ರೂ.1 ಕೋಟಿ ಮಂಜೂರು ಮಾಡಲಾಗುವುದು. ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿದ್ದು, ಆದಷ್ಟು ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ, ಕೃಷಿ ಸಚಿವರಾದ ಬಿ.ಸಿ.ಪಾಟೀಲ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಇತರರು ಉಪಸ್ಥಿತರಿದ್ದರು.