ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಇಂದು ಸಂಜೆ ಅಧಿಸೂಚನೆ: ಸಿಎಂ
ಇಎನ್ಎಲ್ ಹುಬ್ಬಳ್ಳಿ:
ಕೇಂದ್ರ ಸರ್ಕಾರ ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿತ ಮಾಡಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಸಂಜೆಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 7 ರು. ಕಡಿತ ಮಾಡಿ ಅಧಿಸೂಚನೆ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿನ್ನೆ ಸಂಜೆ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ ತಕ್ಷಣ ನಾನು ಹಣಕಾಸು ಮತ್ತು ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರು ನಾವು ಕಡಿಮೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಕಡಿಮೆ ಮಾಡಲು ಬಯಸಿವೆ ಎಂದು ಹೇಳಿದರು. ಆಗ ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಕೇಂದ್ರ ಸರಕಾರ ಪೆಟ್ರೋಲ್ ಗೆ 5 ರು. ಮತ್ತು ಡೀಸೆಲ್ ಗೆ 10 ರು. ಕಡಿಮೆ ಮಾಡಿದೆ. ಅತೀ ಹೆಚ್ಚು ಬಳಕೆಯಾಗುವುದು ಡೀಸೆಲ್. ಸಾರಿಗೆಗಷ್ಟೆ ಅಲ್ಲ, ಒಟ್ಟಾರೆ ಆರ್ಥಿಕತೆ ಮೇಲೆ ಅತೀ ಹೆಚ್ಚು ಪರಿಣಾಮ ಬೀರುವುದು ಡೀಸೆಲ್. ನಾನು ಚರ್ಚೆಯಾದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 7ರು. ಕಡಿತ ಮಾಡಲು ನಿರ್ಧರಿಸಿದ್ದೇವೆ. ಕೇಂದ್ರದ ನಿನ್ನೆಯಿಂದಲೇ ಅಧಿಸೂಚನೆ ಬಂದಿದೆ. ನಿನ್ನೆ ತಡರಾತ್ರಿಯಾಗಿದ್ದರಿಂದ ಇಂದು ಸಂಜೆ ಅಧಿಸೂಚನೆ ಜಾರಿ ಮಾಡಲಾಗುತ್ತದೆ ಎಂದರು.
ಒಂದು ಅಂದಾಜಿನಂತೆ ತೈಲ ಬೆಲೆ ಕಡಿತದಿಂದ ರಾಜ್ಯದ ಬೊಕ್ಕಸಕ್ಕೆ ರೂ. 2100 ಕೋ. ರಾಜಸ್ವಕ್ಕೆ ಕೊರತೆ ಎದುರಾಗಲಿದೆ. ಆದರೂ ಕೂಡ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ರೂ. 100 ದಾಟಿದ ನಂತರ ಕಡಿಮೆ ಮಾಡುವ ಚಿಂತನೆ ಇತ್ತು. ಈಗ ಕೇಂದ್ರ ಸರಕಾರ ನಮಗೆ ಬಹಳ ದೊಡ್ಡ ಸಹಾಯ ಮಾಡಿದೆ. ನರೇಂದ್ರ ಮೋದಿ ಅವರ ತೀರ್ಮಾನ ಜನತೆಗೆ ದೊಡ್ಡ ಗಿಪ್ಟ್ ಕೊಟ್ಟಿದೆ. ಅದನ್ನು ಸ್ವಾಗತ ಮಾಡುತ್ತ ನಮ್ಮ ಕಡೆಯಿಂದಲೂ ಜನರಿಗೆ ಸಹಾಯ ಮಾಡುವ ದೃಷ್ಠಿಯಿಂದ ಈ ತೀರ್ಮಾನ ಮಾಡಿದ್ದೇವೆ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.