ಇಎನ್ಎಲ್ ಬೆಂಗಳೂರು: ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ ಡಿ. 28ರಿಂದ ಹತ್ತು ದಿನ ರಾತ್ರಿ ಕರ್ಫ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.ರಾತ್ರಿ ಗಂಟೆಯಿಂದ ಬೆಳಿಗ್ಗೆ 5ರ ವರೆಗೂ ಕರ್ಫ್ಯೂ ಇರಲಿದೆ.
ಬೆಂಗಳೂರಿನಲ್ಲಿ ತಜ್ಞರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾಕಷ್ಟು ಜನಜಂಗುಳಿ ಸೇರಿ ಕೋವಿಡ್ ಹರಡಲು ಕಾರಣ ಆಗಬಹುದು ಎಂಬ ಕಾರಣಕ್ಕೆ ನೈಟ್ ಕರ್ಪ್ಯೂ ಹೇರಲಾಗಿದೆ.
ರೆಸ್ಟೊರೆಂಟ್, ಬಾರ್, ಕ್ಲಬ್ ಹಾಗೂ ಪಬ್ಗಳಲ್ಲಿ ಒಟ್ಟು ಆಸನಗಳ ಪೈಕಿ ಶೇಕಡ 50 ಜನರ ಪ್ರವೇಶದ ಮಿತಿ ವಿಧಿಸಲಾಗಿದೆ.
‘ಹೊಸ ವರ್ಷಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ನಡೆಸುವ ಸಂಭ್ರಮಾಚರಣೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ’ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಮಾಹಿತಿ ನೀಡಿದರು.