27.1 C
Hubli
ಮೇ 2, 2024
eNews Land
ರಾಜ್ಯ

ಉತ್ತಮ ಬೆಂಗಳೂರು ಹಾಗೂ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು:

ಉತ್ತಮ ಬೆಂಗಳೂರು, ನೂತನ ಉಪನಗರ, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆಯಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಭವಿಷ್ಯದ ಬೆಂಗಳೂರು ನಿರ್ಮಿಸಲು ಹಾಗೂ ಹಳೆಯದನ್ನು ಸರಿಪಡಿಸಲು ಎರಡು ಯೋಜನೆಗಳು ಅಗತ್ಯವಿದೆ. ಇದಕ್ಕಾಗಿ ಅಗಾಧ ಹೂಡಿಕೆಯ ಅಗತ್ಯವಿದೆ. ತ್ಯಾಜ್ಯ ನಿರ್ವಹಣೆ, ಒಳಚರಂಡಿ, ರಾಜಕಾಲುವೆ, ರಸ್ತೆ ನಿರ್ವಹಣೆಯ ಸುಧಾರಣೆಯೂ ಆಗಬೇಕು. ಸಂಚಾರ ನಿರ್ವಹಣೆ ಸೇರಿದಂತೆ ಸಾರಿಗೆ, ಉಪನಗರ ರೈಲು, ರಸ್ತೆ, ಸಿಗ್ನಲ್ ಮುಂತಾದವನ್ನು ಇದು ಒಳಗೊಂಡಿದೆ ಎಂದರು.

ಸಂಚಾರ ವ್ಯವಸ್ಥೆ ನಿರ್ವಹಣೆ: ಸಂಚಾರ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಆಯುಕ್ತಾಲಯವನ್ನು ರಚಿಸಲಾಯಿತು. ಇದರಿಂದಾಗಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗಿದೆ. ಸಿಗ್ನಲ್ ವ್ಯವಸ್ಥೆ ಸುಧಾರಣೆ, ಹೆಚ್ಚುವರಿ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಇಂಧನ ವಲಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದರು.

ತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನ ಬಳಕೆ:
ತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಒಂದು ವಾರ್ಡಿನ ತ್ಯಾಜ್ಯವನ್ನು ಅಲ್ಲಿಯೇ ಸಂಸ್ಕರಿಸಲು ಸಾಧ್ಯವಾಗುವುದು. ಸಾರಿಗೆ, ಸ್ಥಳ ಉಳಿತಾಯವಾಗುವುದಲ್ಲದೆ ಪರಿಸರ ಮಾಲಿನ್ಯ ವನ್ನು ಕಡಿಮೆ ಮಾಡಬಹುದಾಗಿದೆ. ಈ ಯಂತ್ರಗಳನ್ನು ವಾಣಿಜ್ಯ ಸಂಸ್ಥೆಗಳಿಗೆ ಕಡ್ಡಾಯ ಮಾಡಲಾಗುವುದು. ಮಾಲ್ , ಆಸ್ಪತ್ರೆ, ಮಾರುಕಟ್ಟೆ, ಹೋಟೆಲ್ ಗಳಲ್ಲಿ ತ್ಯಾಜ್ಯ ನಿರ್ವಹಣೆಯ ಯಂತ್ರಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗುವುದು. ಒಳಚರಂಡಿ ವ್ಯವಸ್ಥೆ , ರಾಜಕಾಲುವೆಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ. 26000 ಕೋಟಿ ರೂ.ಗಳನ್ನು ಮೆಟ್ರೋ ಮೂರನೇ ಹಂತದ ವಿಸ್ತರಣೆ ಗೆ ಒದಾಗಿಸಲಾಗಿದೆ. ಉಪನಗರ ರೈಲು ಯೋಜನೆಯ ಕಾಮಗಾರಿ ಪ್ರಾರಂಭ ವಾಗಿದೆ. ಪಿ.ಆರ್.ಆರ್ , ಮೆಟ್ರೋ, ರಸ್ತೆ ಅಗಲೀಕರಣದಿಂದಾಗಿ ಸಂಚಾರ ವ್ಯವಸ್ಥೆ ಸುಧಾರಿಸಲಿದೆ. 4 ಸ್ಥಳಗಳಲ್ಲಿ ಉಪನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಅತ್ಯುತ್ತಮ ಅಂತಾರಾಷ್ಟ್ರೀಯ ನಗರವಾಗಿ ಬೆಂಗಳೂರಿನ ಅಭಿವೃದ್ಧಿ:
ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ನಗರಗಳು ಅತ್ಯುತ್ತಮ ರಸ್ತೆ ಹಾಗೂ ಸೌಲಭ್ಯಗಳನ್ನು ಹೊಂದಿವೆ. ಬಿಜಾಪುರ, ರಾಯಚೂರು, ಶಿವಮೊಗ್ಗ, ಹಾಸನ ಧಾರವಾಡ ಗಳಲ್ಲಿ ವಿಮಾನ ನಿಲ್ದಾಣ ಗಳು ಶೀಘ್ರವಾಗಿ ಬರಲಿದೆ. ಈ ನಗರಗಳು ಇದನ್ನು ಸಾಧಿಸಲು ಸಾಧ್ಯವಾಗಿದ್ದರೆ, ಬೆಂಗಳೂರಿನಲ್ಲಿಯೂ ಸಹ ಸಾಧ್ಯವಾಗಿಸಬಹುದು. ಇದಲ್ಲದೆ ಬೆಂಗಳೂರು ಅತ್ಯುತ್ತಮ ಅಂತರರಾಷ್ಟ್ರೀಯ ನಗರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳಿವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಅಂದರೆ 400 ಆರ್.ಅಂಡ್ ಡಿ ಕೇಂದ್ರಗಳು ಇಲ್ಲಿವೆ. ಜಾಗತಿಕ ಹೂಡಿಕೆದಾರರ ಸಮಾವೇಶಸಲ್ಲಿ 8 ಲಕ್ಷ ಕೋಟಿ ಹೂಡಿಕೆಯಾಗುತ್ತಿದೆ. ಮೂರೂವರೆ ಲಕ್ಷ ಕೋಟಿ ರೂ. ಗಳ ಯೋಜನೆಗಳಿಗೆ ಉನ್ನತ ಮಟ್ಟದ ಸಮಿತಿಯಲ್ಲಿ ಮಂಜೂರಾತಿ ನೀಡಲಾಗಿದೆ. ಬೆಂಗಳೂರು ಟೆಕ್ ಸಮ್ಮಿಟ್ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಇವಿ ಆರ್.ಅಂಡ್ ಡಿ ಕರ್ನಾಟಕದಲ್ಲಿವೆ ಆದರೆ ಉತ್ಪಾದನೆ ಇತರ ರಾಜ್ಯಗಳಲ್ಲಿವೆ. ನಮ ಶಕ್ತಿ ಗಳನ್ನು ನಾವು ಬಳಸಿಕೊಳ್ಳಬೇಕು. ಮುಂದಿನ ತಿಂಗಳು ಏರೋ ಶೋ ನಡೆಯಲಿದೆ. ಬೆಂಗಳೂರು ಐ.ಟಿ ಬಿಟಿ ಸ್ಟಾರ್ಟ್ ಅಪ್ ಹಾಗೂ ಏರೋಸ್ಪೇಸ್ ನಗರ. ಏರೋಸ್ಪೇಸ್ ಬಿಡಿ ಭಾಗಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ವಿಮಾನಗಳನ್ನು ಉತ್ಪಾದನೆ ಮಾಡುವ ಮಟ್ಟಕ್ಕೆ ಬೆಂಗಳೂರು ಬೆಳೆಯಬೇಕಿದೆ ಎಂದರು.

ಕಾಲಮಿತಿಯಲ್ಲಿ ಮೂಲಭೂತ ಸಮಸ್ಯೆಗಳ ಇತ್ಯರ್ಥ:
ಮೂಲ ಬೆಂಗಳೂರನ್ನು ಉತ್ತಮ ವಾಗಿ ಯೋಜಿಸಲಾಗಿತ್ತು. ಜನಸಂಖ್ಯೆ ಹೆಚ್ಚಿದ್ದರೂ, ಉತ್ತಮ ವಸತಿ, ರಸ್ತೆ, ಕೆರೆ ಹಾಗೂ ತ್ಯಾಜ್ಯ ನಿರ್ವಹಣೆ ಉತ್ತಮವಾಗಿತ್ತು. ಆದರೆ ಕೆಲವು ನೀತಿಗಳ ತಪ್ಪಾಗಿದೆ. ಬೆಂಗಳೂರಿನಡಿ 8 ಮುನಿಸಿಪಾಲಿಟಿಗಳನ್ನು ಅಭಿವೃದ್ಧಿಪಡಿಸದೇ ಸೇರ್ಪಡೆಗೊಳಿಸಲಾಯಿತು. 110 ಗ್ರಾಮಗಳನ್ನು ಬೆಂಗಳೂರಿಗೆ ಸೇರಿಸಲಾಗಿದೆ. ಈಗ ಕಾರ್ಪೊರೇಷನ್, ಮುನಿಸಿಪಾಲಿಟಿ ಹಾಗೂ ಗ್ರಾಮ ಪಂಚಾಯಿತಿಗಳು ಇವೆ. ಗ್ರಾಮ ಪಂಚಾಯತಿಗಳನ್ನು ಕಾರ್ಪೊರೇಷನ್ ಮಟ್ಟಕ್ಕೆ ಅಭಿವೃದ್ಧಿ ಪಡಿಸಬೇಕಿದೆ. ಇದೊಂದು ದೊಡ್ಡ ಸವಾಲು. ಇಂದಿನ ಸಮಸ್ಯೆ ಹಿಂದಿನ ನೀತಿಗಳ ತಪ್ಪಿನಿಂದಾಗಿದೆ. ನಾವೂ ಅದೇ ತಪ್ಪು ಮಾಡಿದರೆ ಮುಂದಿನ ವರ್ಷಗಳಲ್ಲಿ ಸಮಸ್ಯೆಯಾಗುತ್ತದೆ. ಯೋಜನಾಬದ್ದ ಅಭಿವೃದ್ಧಿ, ಯೋಜಿತ ಸಂಚಾರ ನಿರ್ವಹಣೆ ಯೋಜನಾಬದ್ದ ನಿರ್ವಹಣೆ ಮಾಡಿದರೆ ಬೆಂಗಳೂರಿನ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಬಹುದು. ತ್ಯಾಜ್ಯ ನಿರ್ವಹಣೆಯು ಪ್ರವಾಹ ನಿರ್ವಹಣೆಯನ್ನೂ ಒಳಗೊಂಡಿದೆ. ಮೂಲಭೂತ ಸಮಸ್ಯೆಗಳನ್ನು ಮನಗಂಡು ಪ್ರತಿ ಸಮಸ್ಯೆ ಯನ್ನು ಸಮಗ್ರವಾಗಿ, ಕಾಲಮಿತಿಯಲ್ಲಿ , ನಿರ್ದಿಷ್ಟವಾಗಿ ಬಗೆಹರಿಸಲು ತೀರ್ಮಾನಿಸಲಾಗಿದೆ ಎಂದರು.

ಬ್ರಾಂಡ್ ಬೆಂಗಳೂರು ಅಭಿವೃದ್ಧಿ:  ಬೆಂಗಳೂರು ಅವಕಾಶಗಳ ನಗರಿ. ಬೆಂಗಳೂರು 2 ಲಕ್ಷ ಉದ್ಯೋಗಗಳನ್ನು ಪ್ರತಿ ವರ್ಷ ಸೃಜಿಸುತ್ತಿದೆ. ಮೂಲ ಸಮಸ್ಯೆಗಳನ್ನು ಸರಿಪಡಿಸುತ್ತಲೇ, ಸಕಾರಾತ್ಮಕ ಅಂಶಗಳನ್ನು ಬಳಸಿಕೊಂಡು ಬ್ರಾಂಡ್ ಬೆಂಗಳೂರು ಅಭಿವೃದ್ಧಿ ಪಡಿಸಬೇಕು. ಫಾಸ್ಟ್ ಫಾರ್ವರ್ಡ್ ಆಗಿ ಕೆಲಸ ಮಾಡಬೇಕು. ಈ ಕಾರ್ಯದಲ್ಲಿ ಸರ್ಕಾರ, ಖಾಸಗಿ ವಲಯ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ನಗರದಲ್ಲಿ ನಾಗರಿಕ ಸಂಸ್ಥೆಗಳಿವೆ. ಲಭ್ಯವಿರುವ ಅಗಾಧ ಪ್ರತಿಭೆಯನ್ನು ಬಳಸಿಕೊಂಡು ಹೊಂದಿರುವ ಬೆಂಗಳೂರನ್ನು ಉತ್ತಮಗೊಳಿಸುವ ಪ್ರಯತ್ನಗಳಾಗಬೇಕು. ಕಠಿಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಡಳಿತ,
ಮತ್ತು ಸಾರ್ವಜನಿಕರ ಮನೋಭಾವ ಬದಲಾಗಬೇಕು. ಸಾವಲುಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಬೇಕು ಎಂದರು.

*ಬೆಂಗಳೂರಿನಲ್ಲಿ ಉನ್ನತ ಮಟ್ಟಡ ಅಭಿವೃದ್ಧಿ*
ಬೆಂಗಳೂರು ಪ್ರಕೃತಿ, ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳಿಂದ ಕೂಡಿದೆ. ಮೈಸೂರು ಒಡೆಯರು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ ಯಾವುದೇ ಅರಸರ ರಾಜಧಾನಿಯಾಗಿರದಿದ್ದರೂ ಶಿಕ್ಷಣ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ಯಮಗಳನ್ನು ಬೆಂಗಳೂರು ಆಕರ್ಷಿಸಿದೆ. ವಿಶ್ವದೆಲ್ಲೆಡೆ ನಿರಂತರ ಬೆಳವಣಿಗೆಯನ್ನು ಅನೇಕ ನಗರ ಗಳು ಕಂಡರೂ ಮುಂದಿನ ಹಂತಕ್ಕೆ ಅಭಿವೃದ್ಧಿ ಕಂಡಿಲ್ಲ. ಆದರೆ ಬೆಂಗಳೂರಿನಲ್ಲಿ ಹಾಗಿಲ್ಲ. ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಬೆಳವಣಿಗೆ, ಅಭಿವೃದ್ಧಿ ಉನ್ನತ ಮಟ್ಟದಲ್ಲಿ ಆಗಿದೆ. ಮೈಸೂರು ಒಡೆಯರ ಕಾಲದಲ್ಲಿ ಪ್ರಾರಂಭವಾದ ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ, ಬ್ರಿಟಿಷರ ಕಾಲದಲ್ಲಿ ಹಾಗೂ ಸ್ವಾತಂತ್ರದ ನಂತರದಲ್ಲಿ ಕೈಗಾರೀಕರಣ ಇನ್ನಷ್ಟು ಅಭಿವೃದ್ಧಿ ಕಂಡಿತು. ಆರ್.ಅಂಡ್ ಡಿ , ಉತ್ಪಾದನಾ ವಲಯದಲ್ಲಿ ಕೌಶಲ್ಯ ವುಳ್ಳ ಮಾನವ ಸಂಪನ್ಮೂಲವನ್ನು ನೀಡಿದೆ. ಐ.ಟಿ ಬಿಟಿ ವಲಯವು ಬೆಂಗಳೂರಿನಲ್ಲಿ ಹೊಸ ಪ್ರಪಂಚವನ್ನೇ ಸೃಷ್ಟಿಸಿತು. ಮೈಸೂರು ಒಡೆಯರು, ಬ್ರಿಟಿಷರು ಹಾಗೂ ಐ.ಟಿ ಬಿ.ಟಿ ವಲಯವನ್ನು ಬ್ರಾಂಡ್ ಬೆಂಗಳೂರು ಕಟ್ಟಿದ್ದಕ್ಕಾಗಿ ಅಭಿನಂದಿಸಬೇಕು ಎಂದರು.

Related posts

ಸಿದ್ದು-ಡಿಕೆಶಿ ಜೋಡೆತ್ತಲ್ಲ ಕಾಡೇತ್ತು: ಕಟೀಲ್ ವ್ಯಂಗ್ಯ

eNEWS LAND Team

ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮಾಸ್ಟರ್ ಪ್ಲಾನ್ : ಸಿಎಂ ಬೊಮ್ಮಾಯಿ

eNEWS LAND Team

ರಾಜ್ಯದಲ್ಲಿ ಒಮಿಕ್ರಾನ್ ಕುರಿತು ತಜ್ಞರ ಸಭೆ ನಾಳೆ, ಹೊಸ ಮಾರ್ಗಸೂಚಿ ಜಾರಿಗೆ ಕ್ರಮ: ಬೊಮ್ಮಾಯಿ‌

eNewsLand Team