ಡಿಕೆಶಿ ತಮ್ಮ ಪಕ್ಷ ನೋಡಿಕೊಳ್ಳಲಿ; ಸಿಎಂ
ಹುಬ್ಬಳ್ಳಿ :
ಡಿಕೆಶಿ ತಮ್ಮ ಪಕ್ಷದ ಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ನಾವೇನು ಮಾಡಿದ್ದೇವೆ ಎಂಬುದು ನಮಗೆ, ಜನತೆಗೆ ಗೊತ್ತಿದೆ. ಉದಾಸಿ ಅವರಿಗೆ ಸಚಿವ ಸ್ಥಾನ ನೀಡದ ಕಾರಣ ನಿಧನರಾದರು ಎಂಬ ಹೇಳಿಕೆಗಳಿಂದ ಅವರು ಏನನ್ನೂ ಗೆಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬುಧವಾರ ರಾತ್ರಿ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ವಿರಕ್ತ ಮಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶ್ರೀಮಠದ ಗದ್ದುಗೆಯ ದರ್ಶನ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಸಿ.ಎಂ. ಉದಾಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ ಎಂಬ ಕಾರಣಕ್ಕಾಗಿ ಕೊರಗಿ ಮೃತಪಟ್ಟರು ಎಂಬ ಹೇಳಿಕೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಇಂತಹ ಹೇಳಿಕೆಯಿಂದ ಕಾಂಗ್ರೆಸ್ ಏನನ್ನೂ ಸಾಧಿಸುವುದಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ಆರ್ ಎಸ್ ಎಸ್ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ಸಿಗೆ ಚುನಾವಣಾ ಪ್ರಚಾರದಲ್ಲಿ ಬೇರೆ ವಿಷಯಗಳಿಲ್ಲ. ಆರ್ ಎಸ್ ಎಸ್ ಟೀಕೆ ಮಾಡಿದರೆ ಅಲ್ಪಸಂಖ್ಯಾತರ ಓಲೈಕೆ ಆಗುತ್ತದೆ ಎಂದು ತಿಳಿದು ಹೀಗೆಲ್ಲ ಮಾತನಾಡುತ್ತಾರೆ ಎಂದರು.
ಇನ್ನು, ಯಡಿಯೂರಪ್ಪ ಅವರನ್ನು ಒತ್ತಾಯಪೂರ್ವಕವಾಗಿ ಕೆಳಗೆ ಇಳಿಸಲಾಯಿತು. ಬೊಮ್ಮಾಯಿ ಕಾದು ಕುಳಿತಿದ್ದರು ಎಂಬ ಸಿದ್ದರಾಮಯ್ಯ ಸಣ್ಣ ಹೇಳಿಕೆಗೆ ನಾನು ಉತ್ತರಿಸುವುದಿಲ್ಲಎಂದರು.