ಇಎನ್ಎಲ್ ಧಾರವಾಡ: ಬೆಳಗಾವಿ ಅಧಿವೇಶನದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಕಾನೂನು ಇಲಾಖೆ ಮತಾಂತರ ನಿಷೇಧ ಕಾಯಿದೆ ಪರಿಶೀಲಿಸಿ ಸಭೆಗೆ ಮಂಡಿಸಿದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲವೂ ಸಂವಿಧಾನದ ಮಾನ್ಯತೆ ಪಡೆದ ಧರ್ಮಗಳು. ಯಾರೂ ತಮ್ಮ ಧರ್ಮಾಚರಣೆ, ಮತಾಂತರ ನಿಷೇಧ ಕಾಯಿದೆ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಆದರೆ ಬಡತನ, ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಮತಾಂತರ ಮಾಡುವುದು ಸರಿಯಲ್ಲ. ಹಾಗಾಗಿ ಆಸೆ ಆಮಿಷ ಒಡ್ಡಿ ಮತಾಂತರ ಆಗುವುದಕ್ಕೆ ನಾವು ಅವಕಾಶ ಕೊಡಲ್ಲ.
ಈಗಾಗಲೇ ಬೇರೆ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯಿದೆ ಇದೆ. ಅವೆಲ್ಲವನ್ನೂ ಅವಲೋಕನ ಮಾಡಿದ್ದೇವೆ.
ಅಷ್ಟಕ್ಕೂ ಮತಾಂತರ ನಿನ್ನೆ ಮೊನ್ನೆಯ ವಿಷಯ ಅಲ್ಲ. ಸ್ವಾತಂತ್ರ್ಯ ಬಳಿಕ ಇದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ.
ಬಹುತೇಕರ ಅಪೇಕ್ಷೆ ಮೇರೆಗೆ ಕಾನೂನು ಇಲಾಖೆ ಸ್ಕೂಟ್ನಿ ಕಮೀಟಿ ಆ ಕಾನೂನು ಬಗ್ಗೆ ಪರಿಶೀಲನೆ ಕೈಗೊಂಡಿದೆ.
ಕಾನೂನು ಇಲಾಖೆ ಎಲ್ಲಾ ಪ್ರಕ್ರಿಯೆ ನಡೆಸಿ ಕ್ಯಾಬಿನೆಟ್ ಗೆ ಕಳಿಸಿಕೊಟ್ಟರೆ ಅದರ ಮುಂದಿನ ಕ್ರಮ ವಹಿಸುತ್ತೇವೆ. ಯಾವ ಧರ್ಮದವರಿಗೂ ಆತಂಕ ಬೇಡ.
ಎರಡು ವರ್ಷಗಳ ನಂತರ ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಸಮಗ್ರ ಕರ್ನಾಟಕ, ಅದರಲ್ಲೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಚರ್ಚೆ ಆಗಲಿ ಎಂಬ ಬಯಕೆ ನಮ್ಮದು ಎಂದರು.
ಒಮಿಕ್ರೋನ್ ಕುರಿತು ಈಗಾಗಲೇ ರಾಜ್ಯದಲ್ಲಿ ಒಂದು ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಇದೆ. ಇತರೆಡೆ ಅದನ್ನು ಸ್ಥಾಪಿಸಲು ಕ್ರಮ ವಹಿಸುತ್ತೇವೆ ಎಂದರು.