31 C
Hubli
ಮಾರ್ಚ್ 28, 2024
eNews Land
ರಾಜ್ಯ

ಚಂಬೆಳಕಿನ ಮಹಾಬೆಳಗು; ಸಮನ್ವಯ ಕವಿ ಬಗ್ಗೆ ನಿಮಗೆಷ್ಟು ಗೊತ್ತು?

ಇಎನ್ಎಲ್ ಡೆಸ್ಕ್:

ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾದರು. 1956ರ ವೇಳೆಗೆ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು. ಅವರ ಪತ್ನಿ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.

ಕಾವ್ಯ ಲೋಕದಲ್ಲಿ:

ಚನ್ನವೀರ ಕಣವಿಯವರು ವಿಮರ್ಶೆಯನ್ನು ಅವರು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿ. ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ. ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು. ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬ ಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ. ೧೯೪೯ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ, ೧೯೫೦ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು.

ಚೆಲುವಾದ ಸುನೀತಗಳು:

ಸಾನೆಟ್ಟಿನ ಕಾವ್ಯಬಂಧ ಕಣವಿ ಅವರಿಗೆ ಪ್ರಿಯವಾದುದು. ‘ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್’ ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೆ ಹೇಳಿಕೊಂಡಿದ್ದಾರೆ. “ಕಣವಿಯವರು ತಮ್ಮ ತತ್ವಜ್ಞಾನವನ್ನೆಲ್ಲಾ, ಜೀವನದ ಮೇಲಿದ್ದ ತಮ್ಮ ಭರವಸೆಯನ್ನೆಲ್ಲಾ ಈ ಸುನೀತದಲ್ಲಿ ಅತ್ಯಂತ ಪ್ರಭಾವಿಯಾಗಿ ಮಿಡಿದಿದ್ದಾರೆ” ಎಂಬ ಶಾಂತಿನಾಥ ದೇಸಾಯಿಯವರ ಮಾತು ಇಲ್ಲಿ ಉಲ್ಲೇಖನೀಯ. ಕಷ್ಟಸಾಧ್ಯವಾದ ಈ ಕಾವ್ಯಬಂಧವನ್ನು ವಶಪಡಿಸಿಕೊಂಡ ಕಣವಿ ಚೆಲುವಾದ ಅನೇಕ ಸುನೀತಗಳನ್ನು ರಚಿಸಿದ್ದಾರೆ. ಈ ದೃಷ್ಟಿ ಯಿಂದ ತಮ್ಮ ಸುನೀತಗಳ ಮೂಲಕ ಕಣವಿ, ಕನ್ನಡಕ್ಕೆ ಮಹತ್ವದ ಕಾವ್ಯಕಾಣಿಕೆಯನ್ನು ನೀಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು.
ಶಾಂತಿನಾಥ ದೇಸಾಯಿ ಅವರು ಉಲ್ಲೇಖಿಸಿರುವ ಹಾಗೆ ” ಸ್ವಾತಂತ್ರ್ಯ ಸಂಗ್ರಾಮದಂಥ ಸಾರ್ವಜನಿಕ ವಿಷಯದ ಮೇಲೆ ಬರೆಯುವ ಪ್ರಸಂಗ ಬಂದಾಗ ಲಾಗಲಿ, ಗಾಂಧಿ, ಶಾಸ್ತ್ರಿ, ಶ್ರೀ ಅರವಿಂದರಂತಹ ಮಹಾತ್ಮರ ಬಗ್ಗೆ ಬರೆಯಬೇಕಾದಾಗಲಾಗಲಿ, ಇನ್ನೂ ಹತ್ತಿರದ ಹಿರಿಯರಾದ ಬೇಂದ್ರೆ, ಮುಗಳಿ, ತೀ.ನಂ.ಶ್ರೀ ಮುಂತಾದ ಆತ್ಮೀಯರ ಬಗ್ಗೆ ಬರೆಯುವ ಪ್ರಸಂಗ ಬಂದಾಗಲಾಗಲಿ ಕಣವಿಯವರಿಗೆ ಸಾನೆಟ್ಟು ಒಂದು ಅತ್ಯಂತ ಪ್ರಭಾವಿ ಯಾದ ಅಭಿವ್ಯಕ್ತಿ ಮಾಧ್ಯಮವಾಯಿತು.”

ಜನತೆಗೆ ತಲುಪಿದ ಕವಿ:

ಕವಿತೆ ಜನತೆಗೆ ತಲುಪುವುದು ಅಗತ್ಯ ಎಂದು ಬಯಸುತ್ತಾ ಬಂದ ಕವಿಗಳಲ್ಲಿ ಕಣವಿ ಅವರೂ ಒಬ್ಬರು. ಅವರು ರಚಿಸಿರುವ ಗೀತೆಗಳನ್ನು ಈ ದೃಷ್ಟಿಯಿಂದ ನೋಡಬೇಕು. ಇಲ್ಲಿ ಅವರ ಗಂಭೀರ ಕಾವ್ಯದ ಆಸಕ್ತಿಗಳೇ ಸರಳ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಕಾವ್ಯಬಂಧದಲ್ಲಿ ಅರ್ಥಪುಷ್ಟಿ ಗಿಂತ ನಾದ ಮಾಧುರ್ಯಕ್ಕೆ ಹೆಚ್ಚು ಒತ್ತು ಬೀಳುತ್ತದೆ. ಗೀತೆಗಳ ಸ್ವರೂಪವೇ ಅದು. ಭಾವ ಮತ್ತು ನಾದಗಳಲ್ಲಿ ರಮಿಸಲಾಗದ ಮನಸ್ಸು ಪಾಯಶಃ ಗೀತೆಗಳ ರಚನೆಗೆ ಸಮರ್ಥವಾಗುವುದಿಲ್ಲ. ಕಣವಿ ಅವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಹುಗಳು ವಿಶೇಷವಾಗಿ ಕಂಡು ಬರುತ್ತವೆ. ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಮೊದಲಾದ ಅವರ ಜನಪ್ರಿಯ ಗೀತೆಗಳನ್ನು ಈ ದೃಷ್ಟಿಯಿಂದಲೇ ಲಕ್ಷಿಸಬೇಕಾಗುತ್ತದೆ.

ಒಟ್ಟಾರೆ ತಮ್ಮ ಸುದೀರ್ಘ ಕಾವೋದ್ಯೋಗದಲ್ಲಿ ಕಣವಿಯವರು ಶ್ರೇಷ್ಠವಾದ ಅನೇಕ ಕವಿತೆಗಳನ್ನು ಬರೆದು ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹು ಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಲೋಕೋತ್ತರ ಸ್ಪುರಿತಗಳು ಅವರ ಕಾವ್ಯದಲ್ಲಿ ಆಗಾಗ ಕಾಣುವುದಾದರೂ, ಅವರು ವಿಶೇಷವಾಗಿ ‘ಸಾಮಾನ್ಯ’ದ ಆರಾಧಕರಾದ ಕವಿ. ಅವರ ಕಾವ್ಯದಲ್ಲಿ ನಾವು ಕೇಳುವುದು ಅವಧೂತನ ವಾಣಿಯನ್ನಲ್ಲ; ಸದೃಹಸ್ಥನೊಬ್ಬನ ಸಮಾಧಾನದ ಧ್ವನಿಯನ್ನು, ಇದ್ದುದರಲ್ಲೇ ಬದುಕನ್ನು ಹಿತವಾಗಿಸಿಕೊಂಡು ನೆಮ್ಮದಿಯಿಂದ ಬದುಕುವ ಅಗತ್ಯವನ್ನು ಅವರ ಕಾವ್ಯ ಒತ್ತಿ ಹೇಳುತ್ತಿದೆ. ‘ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ’ ಎಂಬುದು ಅವರ ಹಾರೈಕೆ. ಅದಮ್ಯ ಜೀವನ ಪ್ರೀತಿಯ ಕಣವಿ ಅವರ ಕಾವ್ಯ, ನೋವು ನಲಿವುಗಳನ್ನು ಸಮತೂಕದಲ್ಲಿ ಧಾರಣ ಮಾಡಿದೆ. ಸಮಾಧಾನವೇ ಅದರ ಸ್ಥಾಯಿ ಅಂತಃಸತ್ವವಾಗಿದೆ.

ಕಾವ್ಯಸಂಕಲನ:

ಭಾವಜೀವಿ, ಕಾವ್ಯಾಗ್ನಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದೀಪಧಾರಿ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತೀಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ (ಆಯ್ದ ಕವನಗಳು),ಹೂವು ಹೊರಳುವವು ಸೂರ್ಯನ ಕಡೆಗೆ.

ವಿಮರ್ಶಾಲೇಖನಗಳು ಹಾಗು ಪ್ರಬಂಧ ಸಂಕಲನಗಳು:

ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ

ಮಕ್ಕಳ ಕವಿತೆ:
ಹಕ್ಕಿ ಪುಕ್ಕ, ಚಿಣ್ಣರ ಲೋಕವ ತೆರೆಯೋಣ

ಸಂಪಾದನೆ:
ಕನ್ನಡದ ಕಾಲು ಶತಮಾನ, ಸಿದ್ಧಿ ವಿನಾಯಕ ಮೋದಕ, ಕವನವ್ಯಧ್ವನಿ,

ಸಂಪಾದನೆ (ಇತರರೊಂದಿಗೆ): ನವಿಲೂರು ಮನೆಯಿಂದ, ನವ್ಯಧ್ವನಿ,ನೈವೇದ್ಯ, ನಮ್ಮೆಲ್ಲರ ನೆಹರೂ, ಜೀವನ ಸಿದ್ಧಿ, ಆಧುನಿಕ ಕನ್ನಡ ಕಾವ್ಯ Modern Kannada Poetry, ಸುವರ್ಣ ಸಂಪುಟ, ರತ್ನ ಸಂಪುಟ, ಬಾಬಾ ಫರೀದ

ಪ್ರಶಸ್ತಿ ಪುರಸ್ಕಾರಗಳು:

“ಜೀವಧ್ವನಿ” ಎಂಬ ಕೃತಿಗೆ 1981ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 1999ರಲ್ಲಿ ಹಾಸನದಲ್ಲಿ ನಡೆದ 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರು.

ಆಳ್ವಾಸ್ -ನುಡಿಸಿರಿ 2008 ರ ಸಮ್ಮೇಳನಕ್ಕೆ ಅಧ್ಯಕ್ಷರು. ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ,

ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು ಸಂದಿವೆ.

ಕೃಪೆ: ಜಾಲತಾಣ

 

Related posts

ಜನರ ರಾಜಕಾರಣ ಮಾಡ್ತೇವೆ, ಅಧಿಕಾರದ ರಾಜಕೀಯ ಮಾಡಲ್ಲ: ಸಿಎಂ

eNewsLand Team

ಬಿಎಸ್‌ವೈ ಸರ್ವಶ್ರೇಷ್ಠ ನಾಯಕ

eNEWS LAND Team

ರಾಜ್ಯದ ಎಲ್ಲ ಪ್ರಾದೇಶಿಕ ವಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ : ಸಿಎಂ

eNewsLand Team