ಇಎನ್ಎಲ್ ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯಿತಿಯ ಅಭಿವೃದ್ದಿಯ ವಿಷಯದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಪಿಡಿಒ ಎನ್.ಎ.ನಧಾಪ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಬಿ.ಸುಶೀಲಾ ಆದೇಶ ಹೊರಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಯರಗುಪ್ಪಿ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಹಣಕಾಸಿನ ದುರುಪಯೋಗವಾಗಿರುವ ಬಗ್ಗೆ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ತನಿಖೆ ಮಾಡಲು ತಾಲೂಕು ಪಂಚಾಯಿತ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿತ್ತು.ಯರಗುಪ್ಪಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಎನ್.ಎ. ನದಾಫ್ ಪ್ರತಿನಿತ್ಯ ಕಚೇರಿಯ ಕೆಲಸಕ್ಕೆ ಗೈರು ಆಗುವುದು ಗ್ರಾಮ ಪಂಚಾಯಿತಿಯ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾದ ಯೋಜನೆಗಳಾದ ಗ್ರಾಮ ವಿಕಾಸ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಘನತ್ಯಾಜ್ಯ ವಿಲೇವಾರಿ ಈ ಎಲ್ಲಾ ಯೋಜನೆಗಳ ಬಗ್ಗೆ ಸಮಗ್ರ ತನಿಖೆ ಇರುವುದರಿಂದ ಮತ್ತು ಕಚೇರಿಗೆ ಹಾಜರಾಗಲು ತಾಲೂಕು ಕಚೇರಿಯಿಂದ ತಿಳಿಸಿದರೂ ಸಹ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಇವೆಲ್ಲವನ್ನು ಪರಿಶೀಲಿಸಿ ಅಂತಿಮ ಆದೇಶವನ್ನು ಹೊರಡಿಸಲಾಗಿದೆ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಮಹೇಶ್ ಕುರಿಯವರು ತಿಳಿಸಿದ್ದಾರೆ.