ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸದೃಢರಾಗಲು ನರೇಗಾ ಸಹಕಾರಿ
ಇಎನ್ಎಲ್ ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ಗ್ರಾ.ಪಂ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವುದನ್ನು ಹೆಚ್ಚಿಸಲು ಶನಿವಾರ ತರಬೇತಿ ಕಾರ್ಯಾಗಾರ ಜರುಗಿತು.
ಈ ವೇಳೆ ಮಸ್ಕಿ ತಾ.ಪಂ ಐಇಸಿ ಸಂಯೋಜಕ ಜಿ.ಸತೀಶ್ ಮಾತನಾಡಿ, ನರೇಗಾ ಕಾಮಗಾರಿಗಳಲ್ಲಿ ಮಹಿಳೆಯರು, ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ಸರ್ಕಾರ ಆದ್ಯತೆ ನೀಡಿದೆ. ಆ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗುವಂತೆ ನಿಗಾ ವಹಿಸಿದೆ ಎಂದರು.
ವಿಶೇಷವಾಗಿ ಅಂಗವಿಕಲರು ಅರ್ಧ ದಿನ ಕೆಲಸ ನಿರ್ವಹಿಸಿದರೆ, ಪೂರ್ತಿ ಒಂದು ದಿನದ ಕೂಲಿ ನೀಡಲಾಗುತ್ತಿದೆ. ತೋಟಗಾರಿಕೆ, ಕೃಷಿ, ರೇಷ್ಮೆ, ಅರಣ್ಯ ಇಲಾಖೆ ಸಹಯೋಗದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಸಂಪ್ರದಾಯಿಕ ಬೆಳೆಗಳ ಜತೆಗೆ ವಾಣಿಜ್ಯ ಬೆಳೆಗಳಾದ ಪೇರಲ, ನಿಂಬೆ, ರೇಷ್ಮೆ ಬೆಳೆಯಬಹುದಾಗಿದೆ. ತಾಲೂಕಿನ ಅನೇಕ ರೈತರು ನರೇಗಾ ಯೋಜನೆಯ ಲಾಭ ಪಡೆದಿದ್ದಾರೆ. ದನದ ದೊಡ್ಡಿ, ಕುರಿ ಶೆಡ್, ಎರೆಹುಳು ತೊಟ್ಟಿ ನಿರ್ಮಿಸಿಕೊಳ್ಳುವ ಮೂಲಕ ಉಪ ಕಸಬುಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಮೇಟಿಗಳು, ಮಹಿಳಾ ಕಾಯಕ ಮಿತ್ರರಿಗೆ ಪ್ರತ್ಯೇಕವಾಗಿ ನರೇಗಾ ಯೋಜನೆಯ ಕಡತ, ಹಾಜರಾತಿ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ನರೇಗಾ ಸಹಾಯಕ ಇಂಜಿನಿಯರ್ ನಾಫೀಯಾ ಬೇಗಂ, ವಟಗಲ್ ಗ್ರಾಮ ಪಂಚಾಯತ್ ಗಣಕಯಂತ್ರ ನಿರ್ವಾಹಕ ಬಸವರಾಜ್, ಕಾಯಕ ಮಿತ್ರ ಅಕ್ಕಮ್ಮ ಸೇರಿದಂತೆ ಇತರರಿದ್ದರು.