ಇಎನ್ಎಲ್ ಧಾರವಾಡ: SDPI ಧಾರವಾಡ ಜಿಲ್ಲಾ ಸಮಿತಿ ಸಭೆಯನ್ನು ಜಿಲ್ಲಾಧ್ಯಕ್ಷ ಮಕ್ತುಮ್ ಹೊಸಮನಿ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆಯವರ ಉಪಸ್ಥಿತಿಯಲ್ಲಿ ಜರುಗಿತು.
ಸಭೆಯಲ್ಲಿ ಪಕ್ಷ ಸಂಘಟಿಸುವ ಕುರಿತು ಚರ್ಚೆ ಮುಂಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಬೂತ್ ಸಮಿತಿಗಳ ಬಲವರ್ಧನೆ ಉಸ್ತುವಾರಿಗಳನ್ನು ನೇಮಿಸಲಾಯಿತು. ಹಾಗೇ ಜಿಲ್ಲಾ ಸಮಿತಿಯ ಸದಸ್ಯರಾದ ತೌಫೀಕ್ ಲೂಹಾನಿ ಮತ್ತು ಶಾನು ಅವರ ವೈಯಕ್ತಿಕ ಕಾರಣಗಳಿಂದ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿ ಅಬ್ದುಲ್ ಜಬ್ಬಾರ್ ರವರನ್ನು ಜಿಲ್ಲಾ ಸಮಿತಿಗೆ ನಾಮನಿರ್ದೇಶನ ಮಾಡಲಾಯಿತು. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಈ ಕುರಿತು ಜಿಲ್ಲಾ ಸಮಿತಿ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲು ತೀರ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲು ಬಹು ಮುಖ್ಯ ಕಾರಣ ದಲಿತ ಮತ್ತು ಮುಸ್ಲಿಂ ಸಮುದಾಯ ದೊಡ್ಡ ಮಟ್ಟದಲ್ಲಿ ಅವರಿಗೆ ಬೆಂಬಲ ಸೂಚಿಸಿದ್ದು. ಮುಸ್ಲಿಂ ಸಮುದಾಯದ ಶೇ. 90ಕ್ಕೂ ಹೆಚ್ಚಿನ ಮತಗಳು ಹಾಗೂ ದಲಿತ ಸಮುದಾಯದ ಶೇಕಡ 50 ಕ್ಕೂ ಹೆಚ್ಚು ಮತಗಳು ಈ ಬಾರಿ ಕಾಂಗ್ರೆಸ್ ಮಡಿಲು ಸೇರಿದವು. ಇಷ್ಟು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಈ ಎರಡು ಸಮುದಾಯಗಳಿಗೆ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ಹೊಸತೇನನ್ನು ನೀಡದೆ ಕೇವಲ ಮೂಗಿಗೆ ತುಪ್ಪ ಸವರುವ ಕಾರ್ಯವನ್ನಷ್ಟೇ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತಾವು ನೀಡಿರುವ ಎಲ್ಲಾ ಆಶ್ವಾಸನೆಗಳನ್ನು ಪರಿಪೂರ್ಣವಾಗಿ ಜಾರಿಗೆ ತರುವ ಮೂಲಕ ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಏಳಿಗೆಗಾಗಿ ಶ್ರಮಿಸಲಿ ಎಂದು ಆಗ್ರಹಿಸಿದರು.
ಇತ್ತೀಚಿಗೆ ಮಾನ್ಯ ಮುಖ್ಯ ಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ತಮ್ಮ ಪ್ರಣಾಳಿಕೆ ಹಾಗೂ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂಪಾಯಿಗಳು ನೀಡಿರುವುದಾಗಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ತಮ್ಮ 14 ನೇ ಬಜೆಟ್ ನಲ್ಲಿ ಕೇವಲ 2 ಸಾವಿರ ಕೋಟಿ ನೀಡಿ ಅಲ್ಪಸಂಖ್ಯಾತರಿಗೆ ಮೋಸ ಮಾಡಿ ಮಾತು ತಪ್ಪಿದ್ದಾರೆ ಎಂದರು.
ನಗರಾಭಿವೃದ್ಧಿ ಬಿಬಿಎಂಪಿಗೆ ಹಲವು ಅನುದಾನ ನೀಡಿರುವ ಸಿದ್ದರಾಮಯ್ಯ ಎರಡನೇ ರಾಜಧಾನಿಯಾದ ಹುಬ್ಬಳ್ಳಿ-ಧಾರವಾಡಕ್ಕೆ ಯಾವುದೇ ವಿಶೇಷ ಅನುದಾನ ನೀಡದಿರುವುದು ವಿಷಾದನೀಯ, ಅವಳಿ ನಗರಗಳ ಅಭಿವೃದ್ಧಿಗೆ ಯಾವುದೇ ಪೂರಕ ಯೋಜನೆಗಳನ್ನು ಘೋಷಿಸದೆ ಜಿಲ್ಲೆಯನ್ನು ಕಡೆಗಣಿಸಲಾಗಿರುವುದು ಜಿಲ್ಲೆಯ ಜನತೆಗೆ ನಿರಾಸೆ ತಂದಿದ್ದು ಈ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಡಾ.ವಿಜಯ ಗುಂಟ್ರಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಪೂರ್ ಅಹ್ಮದ ಕುರಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಅಹ್ಮದ್ ಲಷ್ಕರ್, ಜಿಲ್ಲಾ ಕಾರ್ಯದರ್ಶಿ ಸುಹೇಲ್ ಇತರರಿದ್ದರು.