23 C
Hubli
ಸೆಪ್ಟೆಂಬರ್ 25, 2023
eNews Land
ಸಣ್ಣ ಸುದ್ದಿ

ನನ್ನ ಗುರಿ ಗೊತ್ತಿದೆ ಆದರೆ ನನ್ನ ವಿಧಿ ಗೊತ್ತಿಲ್ಲ :ಫಾದರ್ ರಾಯಪ್ಪ ಇನ್ನಿಲ್ಲ

ಇಎನ್ಎಲ್ ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದ ಫಾದರ್ ರಾಯಪ್ಪ(59) ಇನ್ನಿಲ್ಲ.  ಜ.2ರಂದು ಬ್ಯಾಡಗಿಯಲ್ಲಿ ತಾವೇ ಚಲಾಯಿಸುತ್ತಿದ್ದ ಕಾರು ಅಫಘಾತಕ್ಕೀಡಾಗಿ ಜ.07ರಂದು ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಫಾದರ್ ಪಾರ್ಥಿವ ಶರೀರವು ರವಿವಾರ ಸಂಜೆ ಸ್ವ-ಗ್ರಾಮಕ್ಕೆ ಆಗಮಿಸಿದ್ದು, ಸೋಮವಾರ ಮುಂಜಾನೆ 9:30ರವರೆಗೆ ಪೂಜ್ಯ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ 10:00 ಘಂಟೆಗೆ ಗ್ರಾಮದ ಜಪಮಾಲೆ ಮಾತೆ ದೇವಾಲಯದಲ್ಲಿ ಬಲಿ ಪೂಜೆ ಮತ್ತು ಆಶೀರ್ವಚನ ಜರುಗಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಜೂಜಪ್ಪ ಮತ್ತು ನಕ್ಷತ್ರಮ್ಮ ದಂಪತಿಯ ಪುತ್ರನಾಗಿ 1963 ಏ.28 ರಂದು ಜನಿಸಿದ್ದು, 1994 ರ ಏ.06 ರಂದು ಗುರುದೀಕ್ಷೆ ಪಡೆದಿದ್ದರು. ನಂತರ ಕೇವಲ ತಮ್ಮ ಸ್ಥಾನಕ್ಕಲ್ಲದೇ ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗಣೇಶಪುರ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವಾಗ 9 ತಿಂಗಳು ಅಮೆರಿಕಾದಲ್ಲಿ ಸೇವೆ ಸಲ್ಲಿಸಿದ್ದರು. ಬೆಳಗಾವಿ ಧರ್ಮಪ್ರಾಂತ್ಯ ಸಮಾಜ ಸೇವಾ ಸಂಸ್ಥೆ(ಬಿ.ಡಿ.ಎಸ್.ಎಸ್) ಮೂಲಕ ಕಲಘಟಗಿ ತಾಲೂಕಿನಲ್ಲಿಯೂ 2009 ರಿಂದ 2016 ರವರೆಗೆ 62 ಹಳ್ಳಿಗಳಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಬಾಲ್ಯ ವಿವಾಹಗಳಿಂದ ಮಕ್ಕಳ ರಕ್ಷಣೆ, ಸಮಗ್ರ ಜಲಾನಯನ ನಿರ್ವಹಣೆ ಮೂಲಕ ಸಾವಿರಾರು ಕುಟುಂಬಗಳಿಗೆ ಅರಿವು ಮೂಡಿಸಿದ್ದರು.ಬಾಗಲಕೋಟಿಯಲ್ಲಿ ಬಡವರಿಗೆ 105 ಮನೆಗಳನ್ನು ನೆರೆಹಾವಳಿಯಾದ ಸಂದರ್ಭದಲ್ಲಿ ನಿರ್ಮಿಸಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಪ್ಪ ಕಟ್ಟಿಮನಿ ಅವರು ಬದುಕು ಅರಳಿಸುವ ಹೂವು ಬಾಡಿಹೋಯಿತು. ಫಾದರ್ ಸಮಾಜಕ್ಕೆ ಅಘಾದ ಶಕ್ತಿಯಾಗಿದ್ದರು, ಹಾಗೂ ಜಾತಿ-ಭೇದವಿಲ್ಲದೇ ದೇವರು ಕೊಟ್ಟ ವರವಾಗಿದ್ದರು ಎಂದು ಹೇಳಿದರು. ಇಂದು ಜ.10 ರ ಸೋಮವಾರದಂದು ಬೆಳಗಾವಿಯ ಕ್ಯಾಥೆಡ್ರಲ್ ಮಹಾದೇವಾಲಯದಲ್ಲಿ ಮಧ್ಯಾಹ್ನ 3:00 ಘಂಟೆಗೆ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಶಾಸಕ ನಿಂಬಣ್ಣನವರು ಈ ವೇಳೆ ತಾಲೂಕು ಒಬ್ಬ ಸಮಾಜಸೇವಕನನ್ನು ಕಳೆದುಕೊಂಡಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

Related posts

ಮಾಲಿನಿ ಮಲ್ಯ ನಿಧನ: ನಳಿನ್‍ಕುಮಾರ್ ಕಟೀಲ್ ಸಂತಾಪ

eNEWS LAND Team

ಮನೆ ಮನೆಗೆ ಗಂಗೆ ಉತ್ತಮ ಯೋಜನೆ: ಸಿ.ಎಂ.ನಿಂಬಣ್ಣವರ

eNEWS LAND Team

ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳಿಂದ ಜ್ಞಾನದೇಗುಲದ ಕಾರ್ತಿಕ ದೀಪೋತ್ಸವ

eNEWS LAND Team