ಇಎನ್ಎಲ್ ಕಲಘಟಗಿ: ಇದೇ ಮಾ.9 ಕ್ಕೆ ಆಮ್ಆದ್ಮಿ ಪಕ್ಷ ಸೇರ್ಪಡೆಯಾಗಿದ್ದೇನೆ, ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವುದು, ಎಲ್ಲ ವರ್ಗದವರನ್ನೂ ಸೇರಿಸಿಕೊಂಡು ಪರ್ಯಾಯ ರಾಜಕೀಯ ವಿಕೇಂದ್ರಿಕರಣ ಮಾಡುತ್ತೇವೆ. ಇಲ್ಲಿ ಹುದ್ದೆ ಮುಖ್ಯ ಅಲ್ಲ ಸಂಘಟನೆ ಮುಖ್ಯ ಎಂದು ಎಮ್.ಅರವಿಂದ ಹೇಳಿದರು.
ಕಲಘಟಗಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಜನರು ಹೈರಾಣ ಅಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್ ಅವರ ಭ್ರಷ್ಟಾಚಾರ ರಹಿತ ಆಡಳಿತ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಉತ್ತಮ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಇನ್ನೂ5 ವರ್ಷ ಉನ್ನತ ಹುದ್ದೆಯ ಸೇವಾ ಅವಧಿ ಇದ್ದರೂ ಸತತ ಸಾಮಾಜಿಕ ಚಿಂತನೆ ಮಾಡಿ ಪಕ್ಷಕ್ಕೆ ಬಂದಿದ್ದೇವೆ. ಈಗಾಗಲೇ ಇಲ್ಲಿನ ಒಂದು ತಂಡವು ದೆಹಲಿಗೆ ಹೋಗಿ ಬಂದಿದ್ದು, ಅಲ್ಲಿ ಮೊದಲು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುತ್ತಾರೆ. ಅಲ್ಲಿ ಪ್ರವೇಶ ಸಿಗದಿದ್ದಾಗ ಖಾಸಗಿ ಶಾಲೆಗಳಿಗೆ ಕಳಿಸುತ್ತಾರೆ. ಡ್ರೈವಿಂಗ್ ಲೈಸೆನ್ಸ, ಜಾತಿ ಪ್ರಮಾಣ ಪತ್ರ ಮುಂತಾದವುಗಳು ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಇದೆ. ಉಚಿತವಾಗಿ ಮಹಿಳೆಯರಿಗೆ ಪ್ರಯಾಣ, ಮನೆಗೆ ಉಚಿತ ವಿದ್ಯುತ್, ಇನ್ನೂ ಅನೇಕ ಸೌಲಭ್ಯಗಳನ್ನು ಕೊಟ್ಟಿದ್ದಾರೆ. ಆದರೂ ಸರ್ಕಾರವು ಲಾಭದಲ್ಲಿದೆ. ಇವೆಲ್ಲವು ಭ್ರಷ್ಟಾಚಾರ ರಹಿತವಾಗಿ ಇದ್ದಲ್ಲಿ ಮಾತ್ರ ಸಾಧ್ಯ.
ಕಲಘಟಗಿಯಲ್ಲಿ ಅಕ್ರಮ ಸರಾಯಿ ಕಡಿವಾಣವಿಲ್ಲದೇ ಮಾರಾಟವಾಗುತ್ತಿದೆ, ಇದರಿಂದ ಸಮಾಜದ ಸ್ವಾಸ್ತ್ಯ ಹಾಳಾಗುವುದಲ್ಲದೇ ಸರ್ಕಾರದ ಬೊಕ್ಕಸಕ್ಕೂ ಅಪಾರ ಹಾನಿಯಾಗುತ್ತಿದೆ. ರಾಜ್ಯದಲ್ಲಿ ಈಗ ಪಂಜಾಬ್ ಹಾಗೂ ದೆಹಲಿ ಮಾದರಿಯ ರಾಜಕೀಯ ಬದಲಾವಣೆ ಅತೀ ಮುಖ್ಯ, ಗ್ರಾಮ ಮಟ್ಟದಿಂದ ಪಕ್ಷ ಬಲಪಡಿಸೋಣ ಎಂದರು. ಈ ವೇಳೆ ಹನುಮಂತ ಕಲ್ಲವಡ್ಡರ , ಮಾದೇವ ಮೇಟಿ, ಕಿರಣ ದೈವಜ್ಞ ಮಂಜುನಾಥ ಜಕ್ಕನ್ನವರ, ಬಸವರಾಜ ಅಲ್ಲಾಪೂರ ಉಪಸ್ಥಿತರಿದ್ದರು.