ಇಎನ್ಎಲ್ ಹುಬ್ಬಳ್ಳಿ: ಇಂದು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸ್ವೀಪ್ ಸಮಿತಿ, ತಾಲೂಕು ಪಂಚಾಯತ ಹುಬ್ಬಳ್ಳಿ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ನರೇಗಾ ತಾಂತ್ರಿಕ ಸಿಬ್ಬಂದಿ, ಬಿ.ಎಫ್. ಟಿ, ಹುಬ್ಬಳ್ಳಿ ಸೈಕ್ಲಿಸ್ಟ್ ಕ್ಲಬ್ ಹಾಗೂ ರೈಲ್ವೆ ಸೈಕ್ಲಿಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ಚಾಲನೆ ನೀಡಿದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್ ಮಾತನಾಡಿ, ಈಗಾಗಲೇ ಚುನಾವಣಾ ಆಯೋಗ ಮೇ 10 ರಂದು ಮತದಾನ ನಡೆಸಲು ದಿನಾಂಕ ನಿಗದಿ ಪಡಿಸಿದೆ. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಅದರಂತೆ ಇಂದು ಸೈಕಲ ಜಾಥಾವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಆ ಮೂಲಕ ಕಳೆದ ಬಾರಿ ಕಡಿಮೆ ಮತದಾನವಾದ ಪ್ರದೇಶಗಳ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ. ಆ ಮೂಲಕ ಹೆಚ್ಚಿನ ಮತದಾನ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸೈಕಲ ಜಾಥಾವು ತಾಲೂಕು ಆಡಳಿತ ಸೌಧದಿಂದ ಹೊರಟು ರಾಣಿ ಚೆನ್ನಮ್ಮ ವೃತ್ತ ಮುಖಾಂತರವಾಗಿ ಕುಸುಗಲ್ಲ ಗ್ರಾಮದ ವಿವಿಧ ಪ್ರದೇಶಗಳ ಮಾರ್ಗವಾಗಿ ಸಾಗಿ ಗ್ರಾಮ ಪಂಚಾಯತ್ ಕಾರ್ಯಾಲಯದ ಹತ್ತಿರ ಮುಕ್ತಾಯಗೊಂಡಿತು.
ಈ ಜಾಥಾದಲ್ಲಿ ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ತಾಲೂಕಿನ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಡಾ.ಸಂಗಮೇಶ ಬಂಗಾರಿಮಠ, ತಾಲೂಕು ಎಂ.ಆರ್.ಡಬ್ಲೂ ಮಹಾಂತೇಶ ಕುರ್ತಕೋಟಿ, ಹುಬ್ಬಳ್ಳಿ ಸೈಕ್ಲಿಸ್ಟ್ ಕ್ಲಬ್ ನ ಸೈಕ್ಲಿಸ್ಟಗಳು, ರೈಲ್ವೆ ಸೈಕ್ಲಿಸ್ಟಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕರ ಸಂಗ್ರಹಕಾರರು, ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು.