ಇಎನ್ಎಲ್ ಡೆಸ್ಕ್ :
ನೈರುತ್ಯ ರೈಲ್ವೆ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅನುಷ್ಠಾನ
ಕೇಂದ್ರೀಯ ರೈಲ್ವೆ ಆಸ್ಪತ್ರೆ ಹುಬ್ಬಳ್ಳಿ, ವಿಭಾಗೀಯ ರೈಲ್ವೆ ಆಸ್ಪತ್ರೆ ಬೆಂಗಳೂರು ಹಾಗೂ ವಿಭಾಗೀಯ ರೈಲ್ವೆ ಆಸ್ಪತ್ರೆ ಮೈಸೂರಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಹುಬ್ಬಳ್ಳಿ ಕೇಂದ್ರೀಯ ಆಸ್ಪತ್ರೆಯಲ್ಲಿ ಸಾಮಾನ್ಯ ವೈದ್ಯಕೀಯ ಶಾಸ್ತ್ರ (ಜನರಲ್ ಮೆಡಿಸಿನ್), ಮಕ್ಕಳ ವೈದ್ಯಕೀಯ ಶಾಸ್ತ್ರ (ಪಿಡಿಯಾಟ್ರಿಕ್ಸ್), ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ (ಆಬ್ಸ್ತೆಟ್ರಿಕ್ಸ್ ಅಂಡ್ ಗೈನಕಾಲಜಿ) ಸಾಮಾನ್ಯ ಶಸ್ತ್ರಚಿಕಿತ್ಸೆ (ಜನರಲ್ ಸರ್ಜರಿ) ಹಾಗೂ ಮೂಳೆ ಶಾಸ್ತ್ರ (ಆರ್ಥೋಪೆಡಿಕ್ಸ್) ಈ ತಜ್ಞ ಶಾಸ್ತ್ರಗಳ ಸೇವೆ ಹಾಗೂ ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ರೈಲ್ವೆ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯಕೀಯ ಶಾಸ್ತ್ರ (ಜನರಲ್ ಮೆಡಿಸಿನ್) ಮತ್ತು ಸ್ತ್ರೀರೋಗ ಹಾಗೂ ಪ್ರಸೂತಿ ಶಾಸ್ತ್ರ (ಆಬ್ಸ್ತೆಟ್ರಿಕ್ಸ್ ಅಂಡ್ ಗೈನಕಾಲಜಿ) ಈ ತಜ್ಞ ವಿಭಾಗಗಳನ್ನು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಸೇವಾ/ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ.
ಈ ಆಸ್ಪತ್ರೆಗಳನ್ನು ಸಂಪರ್ಕಿಸಿದ ಸಮಯದಲ್ಲಿ ಪ್ರಸ್ತುತಪಡಿಸುವ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಅಥವಾ ಇನ್ಯಾವುದೇ ಮಾನ್ಯವಾದ ಗುರುತಿನ ದಾಖಲೆಯನ್ನು ಪರೀಕ್ಷಿಸಿ ಫಲಾನುಭವಿಗಳನ್ನು ಗುರುತಿಸಲಾಗುವುದು. ಇದು ಅಂತರ್ಜಾಲದಲ್ಲಿ (ಆನ್ಲೈನ್ ಮೂಲಕ) ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಯ ಮೂಲ ರಾಜ್ಯದಿಂದ ಪೂರ್ವ ಪ್ರಮಾಣೀಕರಣಕ್ಕೆ ಒಳಗಾಗುವುದು.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದ್ದು ಭಾರತದ ಜನಸಂಖ್ಯೆಯ ಶೇ. 40 ರಷ್ಟರ ಆರ್ಥಿಕವಾಗಿ ಕೆಳಭಾಗದಲ್ಲಿರುವ ಸುಮಾರು 10.74 ಕೋಟಿ ಬಡ ಹಾಗೂ ದುರ್ಬಲ ಕುಟುಂಬಗಳಿಗೆ (ಅಂದಾಜು 50 ಕೋಟಿ ಫಲಾನುಭವಿಗಳು), ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಗಳ ದ್ವಿತೀಯ ಹಾಗೂ ತೃತೀಯ ಶುಶ್ರೂಷೆಯ ಆಸ್ಪತ್ರೆ ದಾಖಲಾತಿಯ ವೆಚ್ಚದ ರಕ್ಷಣೆಯನ್ನು ಒದಗಿಸುವ ಯೋಜನೆಯಾಗಿದೆ. ಫಲಾನುಭವಿ ಕುಟುಂಬಗಳು ಕ್ರಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶ ಗಳಿಗೆ ಸಾಮಾಜಿಕ – ಆರ್ಥಿಕ ಜಾತಿ ಗಣತಿ 2011 (SECC 2011) ರ ಅಭಾವ ಹಾಗೂ ಔದ್ಯೋಗಿಕ ಮಾನದಂಡಗಳನ್ನು ಆಧರಿಸಿರುತ್ತವೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ಫಲಾನುಭವಿಗೆ ಸೇವೆಯ ಸ್ಥಳ ಅಂದರೆ ಆಸ್ಪತ್ರೆಯಲ್ಲಿ ನಗದು ರಹಿತ ಆರೋಗ್ಯ ಸೇವೆಯ ಅವಕಾಶವನ್ನು ಒದಗಿಸುತ್ತದೆ.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಈ ಸೇವೆಯು ಸಾರ್ವಜನಿಕರಿಗೂ ಲಭ್ಯವಿದ್ದು ಈ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಕೋರಿದ್ದಾರೆ.