35 C
Hubli
ಏಪ್ರಿಲ್ 23, 2024
eNews Land
ಸುದ್ದಿ

ಉತ್ತಮವಾಗಿ ಕೆಲಸ ನಿರ್ವಹಿಸಿ ಇಲಾಖೆಗೆ ಗೌರವ ತನ್ನಿ: ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಟಿ.ಜಿ.ದೊಡ್ಡಮನಿ

ಇಎನ್ಎಲ್ ಹುಬ್ಬಳ್ಳಿ: ಪೊಲೀಸರಿಗೆ ಶಿಸ್ತು ಬಹಳ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು. ಸದೃಢ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಉತ್ತಮವಾಗಿ ಕೆಲಸ ನಿರ್ವಹಿಸಿ ಇಲಾಖೆಗೆ ಗೌರವ ತನ್ನಿ ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾದ ಟಿ.ಜಿ.ದೊಡ್ಡಮನಿ ಹೇಳಿದರು.

ಇಂದು ಗೋಕುಲ್ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಪೊಲೀಸರು ಒಂದೇ ಸ್ಥಳದಲ್ಲಿಯೇ ಕಾರ್ಯನಿರ್ವಹಿಸದೇ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ಮಕ್ಕಳಿಗೆ ಸರಿಯಾದ ಶಿಕ್ಷಣ, ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನೊಂದವರು, ಮಹಿಳೆಯರಿಗೆ ಶೀಘ್ರವಾಗಿ ಸ್ಪಂದನೆ ನೀಡಬೇಕು. ಅಸಹಾಯಕರಿಗೆ ಧೈರ್ಯ ತುಂಬಿ ಕೂಡಲೇ ಸ್ಪಂದಿಸಿ ಸಮಸ್ಯೆ ಪರಿಹರಿಸಿ. ಸರಿಯಾಗಿ ತನಿಖೆ ಕೈಗೊಂಡು ನೊಂದವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಬೇಕು. ಸಾರ್ವಜನಿಕ ಸ್ಥಳ ಹಾಗೂ ಪೊಲೀಸ್ ಕಚೇರಿ ಎದುರಿಗೆ ಜನರು ಗುಂಪು ಸೇರಲು ಅವಕಾಶ ಮಾಡಿಕೊಡಬಾರದು. ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಂಡು ಹೋಗಬೇಕು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಸಹಾಯ ಹಸ್ತ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ನಾನು ರಾಯಚೂರು ಜಿಲ್ಲೆಯವನಾಗಿದ್ದರೂ ಸಹ ನಮ್ಮ ಹೊಲಗಳು ತೆಲಂಗಾಣ ರಾಜ್ಯದಲ್ಲಿ ಬರುತ್ತವೆ. 1980 ರಲ್ಲಿ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದೆ. ಪೊಲೀಸ್ ಕೆಲಸಕ್ಕೆ ಸೇರಲು ಮೊದಲು ಇಚ್ಛೆ ಇರಲಿಲ್ಲ. ಎರಡು ಸಲ ಆಯ್ಕೆಯಾದರೂ ಸಹ ಪೊಲೀಸ ಇಲಾಖೆ ಕೆಲಸಕ್ಕೆ ಸೇರಿರಲಿಲ್ಲ. ನಂತರ ಅವರಿವರ ಸಲಹೆ ಮೇರೆಗೆ ಪೊಲೀಸ ಕೆಲಸಕ್ಕೆ ಸೇರಿಕೊಂಡೆ. ಕುಷ್ಟಗಿ, ತಾವರಗೇರಿ, ಬೀದರ, ರಾಯಚೂರು, ಹುಬ್ಬಳ್ಳಿ, ಔರಾದ್, ಗುಲ್ಬರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆಗೈದು ಕೊನೆಗೆ ಹುಬ್ಬಳ್ಳಿಯಲ್ಲಿ ನಿವೃತ್ತನಾದೆ ಎಂದು ತಮ್ಮ ಸೇವಾನುಭವವನ್ನು ಮೆಲುಕು ಹಾಕಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರಮನ್ ಗುಪ್ತಾ ಮಾತನಾಡಿ, ಕರ್ನಾಟಕ ರಾಜ್ಯ ಏಕೀಕರಣವಾದ ನಂತರ 1965 ಎಪ್ರೀಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅದರ ಸವಿನೆನಪಿಗಾಗಿ ಪ್ರತಿವರ್ಷ ಏಪ್ರೀಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಮಾಜದಲ್ಲಿ ಪೊಲೀಸರು ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡು ಸೇವೆ ಸ್ಮರಿಸುವ ದಿನವಾಗಿದೆ. ಕಾನೂನು ಪಾಲನೆ, ಜನರ ಆಸ್ತಿಪಾಸ್ತಿ ರಕ್ಷಣೆ, ಅಕ್ರಮ ಚಟುವಟಿಕೆ ತಡೆಯುವಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಅವರ ಸಾಹಸ ಮತ್ತು ನಿಸ್ವಾರ್ಥ ಸೇವೆಯನ್ನು ಈ ದಿನ ನೆನೆಯಲಾಗುವುದು. ಕಳೆದ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ ರೂ. 28 ಲಕ್ಷ ರೂ. ಸಂಗ್ರಹವಾಗಿದ್ದು, ಈ ಹಣವನ್ನು ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿ, ಪೊಲೀಸ್ ಕಲ್ಯಾಣ ನಿಧಿ, ಪೊಲೀಸರ ಇತರ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

ಉದ್ಯಮಿ ವಿ.ಎಸ್.ವಿ. ಪ್ರಸಾದ್ ಅವರು ರೂ. 1 ಲಕ್ಷ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಪೊಲೀಸ್ ಧ್ವಜಗಳನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾದ ಟಿ.ಜಿ. ದೊಡ್ಡಮನಿ ಅವರು ವಿವಿಧ ಪೊಲೀಸ್ ತಂಡಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು.

ಕವಾಯತ ಪ್ರಧಾನ ದಂಡನಾಯಕ ಮಾರುತಿ ಹೆಗಡೆ, ಸಹಾಯಕ ಕವಾಯತ ದಂಡನಾಯಕ ಭಾಗಣ್ಣ ವಾಲೀಕಾರ ನೇತೃತ್ವದಲ್ಲಿ ನಗರ ಸಶಸ್ತ್ರ ತುಕಡಿ, ಉತ್ತರ ಉಪ ವಿಭಾಗ ತುಕಡಿ, ದಕ್ಷಿಣ ಉಪವಿಭಾಗ ತುಕಡಿ, ಧಾರವಾಡ ಉಪವಿಭಾಗ ತುಕಡಿ, ಮಹಿಳಾ ತುಕಡಿ, ಸಂಚಾರ ಉಪವಿಭಾಗ ತುಕಡಿ, ಪೊಲೀಸ್ ವಾದ್ಯ ವೃಂದದ ಆಕರ್ಷಕ ಪಥ ಸಂಚಲನ ಗಮನ ಸೆಳೆದವು.

ಡಿಸಿಪಿ ವೈ.ಕೆ. ಕಾಶಪ್ಪನವರ, ರವಿ ನಾಯ್ಕ, ಆರ್.ಕೆ. ಬಡಿಗೇರ, ನಿವೃತ್ತ ಪೊಲೀಸ್ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು. ಡಿಸಿಪಿ ರಾಜೀವ.ಎಂ‌ ಸ್ವಾಗತಿಸಿದರು. ಡಿಸಿಪಿ ಗೋಪಾಲ ಬ್ಯಾಕೋಡ ವಂದಿಸಿದರು.

Related posts

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

eNewsLand Team

ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

eNEWS LAND Team

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರೂ. 273 ಕೋಟಿ ಬಿಡುಗಡೆ : ಸಚಿವ ಜೋಶಿ

eNEWS LAND Team