ಇಎನ್ಎಲ್ ಬ್ಯೂರೋ : ಗೋವಾದಲ್ಲಿ ದೇಶದ ಯಾವುದೇ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಸ್ಫರ್ಧಿಸಬಹುದು, ಅವರಿಗೆ ಸ್ವಾಗತವಿದೆ. ಆದರೆ ಅವರು ಯೋಗ್ಯ ಮಾರ್ಗದಲ್ಲಿ ಗೋವಾಕ್ಕೆ ಪ್ರವೇಶಿಸಿ, ಯೋಗ್ಯ ವರ್ತನೆಯನ್ನು ಇಟ್ಟುಕೊಳ್ಳುವುದು ಅಷ್ಟೇ ಮಹತ್ವದ್ದಾಗಿದೆ. ಗೋವಾಕ್ಕೆ ಬಂದು ಯಾವುದೇ ಪಕ್ಷವು ದಾದಾಗಿರಿ ಮಾಡಿದರೆ ಗೋವಾ ರಾಜ್ಯದ ಜನರು ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಎಚ್ಚರಿಕೆ ನೀಡಿದ್ದಾರೆ.
ಗೋವಾದ ಬಾಂಬೋಲಿಂ ಬಳಿಯಿರುವ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಹಿಳಾ ಸಂವಾದ ಪರಿಷತ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು- ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರು ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಯನ್ನು ಜಾರಿಗೆ ತಂದಿದ್ದರು. ರಾಜ್ಯದ 1,30,000 ಜನ ಗೃಹಿಣಿಯರು ಪ್ರತಿ ತಿಂಗಳು ಗೃಹ ಆಧಾರ ಯೋಜನೆಯ ಅಡಿಯಲ್ಲಿ ಮಾಸಿಕ ಭತ್ತೆಯನ್ನು ಪಡೆಯುತ್ತಿದ್ದಾರೆ. ಇಷ್ಟೇ ಅಲ್ಲದೆಯೇ ದಯಾನಂದ ಸಾಮಾಜಿಕ ಸುರಕ್ಷಾ ಯೋಜನೆಯ ಅಡಿಯಲ್ಲಿಯೂ ಮಹಿಳೆಯರಿಗೆ ಲಾಭ ದೊರೆಯುತ್ತಿದೆ ಎಂದು ನುಡಿದರು.
ಗೋವಾ ರಾಜ್ಯವು ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದೇ ರೀತಿ ವರ್ಷಕ್ಕೆ ಎರಡು ಬಾರಿ ಮಹಿಳಾ ಸಂವಾದ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಾವಂತ್ ಅಭಿಪ್ರಾಯಪಟ್ಟರು.