ಇಎನ್ಎಲ್
ಹುಬ್ಬಳ್ಳಿ : ವಿಜಯಪುರದ ಕೃತ್ತಿಕಾ ಜಂಗಿನಮಠ ಕೊಳಲು ವಾದನ ಶ್ರೋತೃಗಳ ಮನಸೆಳೆಯಿತು.
ರಾಜಾಶ್ರಯ ಕಾಲದಿಂದಲೂ ಸಂಗೀತಕ್ಕೆ ವಿಶೇಷ ಸ್ಥಾನ ಮಾನ ನೀಡುವ ಜತೆಗೆ ಪ್ರೋತ್ಸಾಹಿಸುವ ಕೆಲಸ ಆಗುತ್ತಾ ಬಂದಿದ್ದು, ಇದು ಮುಂದುವರಿಯಬೇಕಿದೆ. ಕಲೆ, ಸಾಹಿತ್ಯ, ಸಂಪ್ರದಾಯ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೋನ್ಮುಖರಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಕ್ಷಮತಾ ಸೇವಾ ಸಂಸ್ಥೆ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ನಡೆದ ಭೀಮಪಲಾಸ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಚಿಂತನೆ, ಮಾನವೀಯ ಮೌಲ್ಯಗಳ ದರ್ಶನ ಮತ್ತು ಪ್ರಚುರ ಪಡಿಸುವ ಸಂಗೀತಕ್ಕೆ ಅಗಾಧ ಶಕ್ತಿ ಮತ್ತು ಇತಿಹಾಸವನ್ನು ಹೊಂದಿದೆ. ಸದ್ಯ ಸ್ಥಳೀಯ ಭಾಷೆ ಬಿಟ್ಟು ಅನ್ಯ ಭಾಷೆಗಳ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಇದು ಭಾಷೆ, ಪರಂಪರೆ, ಸಂಸ್ಕೃತಿ, ಅಸ್ಮಿತೆ ಬಗ್ಗೆ ಸಂದೇಶ ಹುಟ್ಟಿಸಿದೆ. ಹಾಗಾಗಿ ನಮ್ಮ ಸಂಗೀತ, ನಮ್ಮ ಭಾಷೆಯನ್ನು ಬೆಳೆಸಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ, ಎಲ್ಐಸಿ ದಕ್ಷಿಣ ಮಧ್ಯ ವಲಯಾಧಿಕಾರಿ ಎಂ. ಜಗನ್ನಾಥ ಮಾತನಾಡಿದರು.
ಬಳಿಕ ನಡೆದ ಕಿರಾನಾ ಘರಾಣೆ ನವದೆಹಲಿಯ ಪಂ. ಹರೀಶ ತಿವಾರಿ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರ ಗಮನ ಸೆಳೆದರೆ, ವಿಜಯಪುರದ ಕೃತ್ತಿಕಾ ಜಂಗಿನಮಠ ಅವರ ಬಾನ್ಸುರಿ, ಕೊಳಲು ವಾದನ ಶೋತೃಗಳನ್ನು ಮಂತ್ರಮಗ್ದರನ್ನಾಗಿಸಿತು. ಪ. ರಘುನಾಥ ನಾಕೋಡ, ಕಾರ್ತಿಕ ಜಂಗಿನಮಠ ತಬಲಾ, ಪಂ. ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ, ಜೆ.ಎಚ್. ನರೇಗಲ್, ಮುರುಳಿಧರ ಮಳಿಗೆ, ಗಣಪತಿ ಭಟ್, ಸಮೀರ ಜೋಶಿ ಸೇರಿದಂತೆ ಇತರರು ಇದ್ದರು.