ಇಎನ್ಎಲ್ ಧಾರವಾಡ: ಧಾರವಾಡದ ಕ್ಯಾರಕೊಪ್ಪ- ಮುಗದ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಹಳಿ ಮೇಲೆ ಅಪರಿಚಿತ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ವೈರ್ ನಿಂದ ಕುತ್ತಿಗೆಗೆ ಬಿಗಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ಕೊಲೆಗೀಡಾಗಿದ್ದಾನೆ. ಬೆಳಗ್ಗೆ ರೈಲ್ವೆ ಟ್ರ್ಯಾಕ್ಮನ್ಗಳು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣಿಯ ಡಿವೈಎಸ್ಪಿ ಪುಷ್ಪಲತಾ, ಇನ್ಸ್ಪೆಕ್ಟರ್ ಅಂಜನಪ್ಪ, ಪಿಎಸ್ಐ ಸತ್ಯಪ್ಪ ಮುಕ್ಕಣ್ಣವರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದರು. ಶ್ವಾನದಳ, ಬೆರಳಚ್ಚು ತಜ್ಞರನ್ನೂ ಸ್ಥಳಕ್ಕೆ ಕರೆಸಿ, ದಾಖಲೆ ಸಂಗ್ರಹಿಸಲಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಯಾದ ಸ್ಥಳದಲ್ಲಿ ಅಲ್ಲಲ್ಲಿ ರಕ್ತದ ಕಲೆ ಗುರುತು ಇದೆ.
ತಲೆ ಮೇಲೆ ಎತ್ತಿ ಹಾಕಿದ್ದ ಕಲ್ಲು ಹಳಿ ಪಕ್ಕದಲ್ಲೇ ಪತ್ತೆಯಾಗಿದೆ. ಬುಧವಾರ ತಡರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿರುವ ಸಾಧ್ಯತೆ ಇದೆ. ಕೊಲೆಯಾದ ವ್ಯಕ್ತಿ ಯಾರು? ಎಂಬ ಕುರಿತು ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ, ಮೃತದೇಹವನ್ನು ಕಿಮ್ಸ್ಗೆ ರವಾನಿಸಲಾಗಿದೆ.