ಇಎನ್ಎಲ್ ಹುಬ್ಬಳ್ಳಿ; ಮಂಕಿ ಕ್ಯಾಪ್ ಹಾಕಿಕೊಂಡ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ಬ್ಯಾಂಕ್ನ ಕ್ಯಾಶಿಯರ್ ಹಾಗೂ ಮ್ಯಾನೇಜರ್ಗೆ ಚಾಕು ತೋರಿಸಿ 6.39ಲಕ್ಷ ದೋಚಿಕೊಂಡು ಹೋಗುವಾಗ ಸಾರ್ವಜನಿಕರ ಸಹಾಯದಿಂದ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ವಿಜಯಪುರ ಮೂಲದ ಹಾಗೂ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣಕುಮಾರ್ ಎಂಬಾತನೇ ಬಂಧಿತ ದರೋಡೆಕೋರ. ಮಂಗಳವಾರ ಮಧ್ಯಾಹ್ನ 2.15ರ ಸುಮಾರಿಗೆ ಇಲ್ಲಿಯ ಕೊಪ್ಪಿಕರ ರಸ್ತೆಯ ಬ್ಯಾಂಕ್ಗೆ ಮಂಕಿ ಕ್ಯಾಪ್ ಹಾಕಿಕೊಂಡು ಒಳ ಬಂದ ಪ್ರವೀಣಕುಮಾರ್ ಏಕಾಏಕಿ ಕೈಯಲ್ಲಿ ಚಾಕು ಹಿಡಿದು ಕ್ಯಾಶಿಯರ್ ಹಾಗೂ ಮ್ಯಾನೇಜರ್ಗೆ ಚಾಕು ತೋರಿಸಿ ಕ್ಯಾಶಕೌಂಟರ್ನಲ್ಲಿದ್ದ ₹ 639125 ಹಣವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಪರಾರಿಯಾಗಲು ಯತ್ನಿಸಿದ್ದನು. ಅಲ್ಲದೇ, ಈ ಸಂದರ್ಭದಲ್ಲಿ ಯಾರಾದರೂ ಕೂಗುವುದು, ಓಡುವುದನ್ನು ಮಾಡಿದರೆ, ಚಾಕುವಿನಿಂದ ಚುಚ್ಚುವುದಾಗಿ ಬೆದರಿಸಿದ್ದಾನೆ.
ಈ ವೇಳೆ ಬ್ಯಾಂಕ್ ಮತ್ತು ಹೊರ ಭಾಗದಲ್ಲಿ ಸಾರ್ವಜನಿಕರು ತಡೆಯಲು ಮುಂದಾದ ವೇಳೆ ಅವರನ್ನು ಬೆದರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಕರ್ತವ್ಯನಿರತ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಉಮೇಶ ಬಂಗಾರಿ ಹಾಗೂ ಉಪನಗರ ಠಾಣೆಯ ಮಂಜುನಾಥ ಹಾಲವರ ಆತನನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಬ್ಯಾಂಕ್ನ ೨೦೦ ಮೀ. ಅಂತರದಲ್ಲಿ ಹಿಡಿದಿದ್ದಾರೆ. ಅಲ್ಲದೇ, ಆತನ ಬಳಿಯಿಂದ ಹಣ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ ಚಾಕುವನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಲಾಬೂರಾಮ್, ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರದಿಂದ ಹಾಡಹಗಲೇ ಬ್ಯಾಂಕ್ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಾರ್ವಜನಿಕರು ಸಹ ಉತ್ತಮ ಸಹಕಾರ ನೀಡಿದ್ದರಿಂದ ಪರಾರಿಯಾಗುತ್ತಿದ್ದ ಬ್ಯಾಂಕ್ ದರೋಡೆಕೋರರನ್ನು ಪೊಲೀಸರು ಬಂಧಿಸಲು ಸಾಧ್ಯವಾಗಿದೆ. ಈತನ ಹೆಚ್ಚಿನ ತನಿಖೆಗೆ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಾಥಮಿಕವಾಗಿ ಎರಡು ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದು ಲಾಡ್ಜಿನಲ್ಲಿ ಉಳಿದಿದ್ದ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಮತ್ತು ಆತನ ಹಿನ್ನೆಲೆಯ ಇನ್ನಷ್ಟು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಉಮೇಶ ಬಂಗಾರಿ ಹಾಗೂ ಮಂಜುನಾಥ ಹಾಲವರ ಜೀವದ ಹಂಗು ತೊರೆದು ಆರೋಪಿಯನ್ನು ಬಂಧಿಸಿದ್ದಾರೆ. ಇವರ ಕಾರ್ಯ ಶ್ಲಾಘನೀಯವಾಗಿದ್ದು, ಸಿಬ್ಬಂದಿಗೆ ತಲಾ ₹ 25 ಸಾವಿರ. ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಟ್ವಿಟ್ ಮಾಡಿ ಇಬ್ಬರು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಮಹಾನಿರ್ದೇಶಕರು ಶ್ಲಾಘಿಸಿದ್ದಾರೆ.
Two cops intervene risking their lives and catch the bank robber..May your tribe increase!! Well done Team Hubli Dharwad Police @JnanendraAraga @CMofKarnataka https://t.co/kxClgqMQ8b
— DGP KARNATAKA (@DgpKarnataka) January 18, 2022
ದಕ್ಷಿಣ ವಿಭಾಗ ಎಸಿಪಿ ಆರ್.ಕೆ. ಪಾಟೀಲ, ಶಹರ ಠಾಣೆ ಪಿಐ ಆನಂದ ಒನಕುದ್ರೆ, ಉಪನಗರ ಠಾಣೆ ಪಿಐ ಡಿ.ಬಿ. ರವಿಚಂದ್ರ ಸೇರಿದಂತೆ ಇತರರು ಇದ್ದರು.
ಸದ್ಯ ಆರೋಪಿ ಮದುವೆ ನಿಶ್ಚಿಯವಾಗಿತ್ತು ಎಂದು ಹೇಳುತ್ತಿದ್ದಾನೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ, ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದರು.