ಇಎನ್ಎಲ್ ಕಲಘಟಗಿ:
ಒಳ್ಳೆಯ ಅಧಿಕಾರಿಗಳು ಇದ್ದೇ ಇದ್ದಾರೆ, ಕಾಮಗಾರಿಗಳು ಗುಣಮಟ್ಟದ್ದಾಗಿರಲಿ, ರೈತರ ಆದಾಯ ದ್ವಿಗುಣಗೊಳಿಸಿ, ಗುಣಮಟ್ಟದ ಸಾಮಗ್ರಿಗಳನ್ನು ಒದಗಿಸಿ, ಕೃಷಿ ಮಂತ್ರಿಗಳು ಜಾರಿಗೆ ತರುವ ಯೋಜನೆಗಳನ್ನು ರೈತರಿಗೆ ತಲುಪಿಸಿ. ರೈತನಿಲ್ಲದಿದ್ದರೆ ನಾವ್ಯಾರು ಇಲ್ಲ ಎಂದು ಶಾಸಕ ಸಿ.ಎಂ.ನಿoಬಣ್ಣರವರು ಹೇಳಿದರು.
ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಪಕ್ಷ ಬೇಧ ಮರೆತು ನೆರೆಹಾವಳಿಯಿಂದ ಬಿದ್ದ ಮನೆಗಳಿಗೆ ಶೀಘ್ರ ಪರಿಹಾರ ನೀಡಿ, ಕೆಲವೆಡೆ ಪರಿಹಾರಗಳು ಸರಿಯಾಗಿ ರೈತರಿಗೆ ತಲುಪುತ್ತಿಲ್ಲ ಎಂಬ ದೂರುಗಳು ಬಂದಿವೆ. ಬಡವರ ಹಣ ತಿಂದವ ಪಿಶಾಚಿ ಇದ್ದಂತೆ ಎಂದರು. ರೈತರ ಬೆಳೆ ವಿಮೆಯಲ್ಲಿ ಹಾಗೂ ಪರಿಹಾರದಲ್ಲಿ ಏನೇ ಲೋಪವಿದ್ದರೂ ಕೂಡಲೇ ಸರಿಪಡಿಸಿರಿ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್ ಕಟ್ಟೇಗೌಡ್ರ ಅವರಿಗೆ ಸೂಚಿಸಿದರು. ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಬಂದಿವೆ. ಅಬಕಾರಿ ಇಲಾಖೆಯು ಈವರೆಗೆ ಅಕ್ರಮ-ಮದ್ಯ ಮಾರಾಟಕ್ಕೆ ಕ್ರಮ ಕೈಗೊಂಡಿಲ್ಲ, ಪೋಲಿಸ್ ಇಲಾಖೆಯೂ ಸಹ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಖಡಕ್ ಆಗಿ ಸೂಚಿಸಿದರು.
ತಾಲೂಕಿನ ಕೆಲವು ಪಿ.ಡಿ.ಓ ಗಳು ತಮ್ಮ ಪಂಚಾಯತಿಗಳಲ್ಲಿ ಇರದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗಿವೆ. ತಾವು ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲವೇ ನಿರ್ಧಾಕ್ಷಿಣ್ಯವಾಗಿ ಮನೆಗೆ ಹೋಗಿ ಎಂದರು. ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ್ ಮಹೇಶ ಭಜಂತ್ರಿ ಅವರಿಗೆ ಅತಿವೃಷ್ಠಿಯಿಂದಾಗಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಹಲವಾರು ಕೆರೆಗಳು ಹಾಳಾಗಿವೆ. ಸರ್ಕಾರ ಕೊಟ್ಯಾಂತರ ರೂ. ಅನುದಾನ ನೀಡಿದ್ದರೂ ಇದನ್ನು ಸರಿಯಾಗಿ ಬಳಸುತ್ತಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ್ ಮಹೇಶ ಭಜಂತ್ರಿ ಅವರಿಗೆ ಎಚ್ಚರಿಕೆ ಕೊಟ್ಟರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ, ತಾ.ಪಂ. ಪ್ರಭಾರಿ ಇ.ಓ. ಎಸ್.ಸಿ. ಮಠಪತಿ ತಹಶೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ, ಚಂದ್ರು ಪೂಜಾರ, ಅರಣ್ಯ ಅಧಿಕಾರಿ ಶ್ರೀಕಾಂತ ಪಾಟೀಲ, ಲೋಕೋಪಯೋಗಿ ಇಲಾಖೆಯ ಸಿ.ಎಂ. ಹಿರೇಮಠ, ಹಾಗೂ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ,ಗ್ರಾ.ಪಂ.ನ 16ಪಿ.ಡಿ.ಓ ಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕರು ಎಲ್ಲರಿಗೂ ಹೊಸ ವರ್ಷದ ಶುಭಾಷಯ ಕೋರಿದರು.