ಇಎನ್ಎಲ್ ಧಾರವಾಡ: ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಬುಧವಾರ ನಡೆದ ಪ್ರತಿಭಟನೆ ವೇಳೆ ಕುಲಪತಿ ಡಾ.ಪಿ.ಈಶ್ವರ ಭಟ್ ಅವರಿಗೆ ವಿದ್ಯಾರ್ಥಿಗಳು ಶಾಯಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷದ ವಿದ್ಯಾರ್ಥಿಗಳನ್ನು ಈಗಾಗಲೇ ಪ್ರಮೋಟ್ ಮಾಡಿರುವ ಕಾನೂನು ವಿಶ್ವವಿದ್ಯಾಲಯ ಸದ್ಯ ಅದೇ ರೀತಿಯಲ್ಲಿ ಐದು ವರ್ಷದ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿ ಹುಬ್ಬಳ್ಳಿ ನವನಗರದ ಕಾನೂನು ವಿವಿ ಎದುರು ಪ್ರತಿಭಟನೆ ನಡೆಯುತ್ತಿತ್ತು.
3ನೇ ವರ್ಷದ ವಿದ್ಯಾರ್ಥಿಗಳ ಮುಂಬಡ್ತಿ ಆದೇಶದ ಕುರಿತು ಉಚ್ಚ ನ್ಯಾಯಾಲಯಕ್ಕೆ ವಿಶ್ವ ವಿದ್ಯಾಲಯವು ಸಲ್ಲಿಸಿದ ಮೇಲ್ಮನವಿ ವಾಪಸ್ ಪಡೆಯುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬೆಂಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಕುಲಪತಿ ಡಾ.ಈಶ್ವರ ಭಟ್ ರಾಜೀನಾಮೆಗೆ ಒತ್ತಾಯಿಸಿದರು.
ಮಧ್ಯಾಹ್ನ ವಿದ್ಯಾರ್ಥಿಗಳ ಮನವಿ ಆಲಿಸಲು ಪ್ರತಿಭಟನ ಸ್ಥಳಕ್ಕೆ ಬಂದ ಡಾ. ಪಿ.ಈಶ್ವರ ಭಟ್, ಪರೀಕ್ಷೆ ಬರೆದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಎನ್ನುತ್ತಿದ್ದಂತೆ ಕೆಲ ವಿದ್ಯಾರ್ಥಿಗಳು ಕುಲಪತಿ ಅವರಿಗೆ ಮುತ್ತಿಗರ ಹಾಕಿ ಶಾಯಿ ತೂರಿದರು.
ತಕ್ಷಣ ಎಚ್ಚೆತ್ತ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿ ವಿಸಿ ಅವರನ್ನು ಸುರಕ್ಷಿತವಾಗಿ ಕ್ಯಾಂಪಸ್ ಒಳಕ್ಕೆ ಕರೆದೊಯ್ದರು. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಪ್ರತಿಭಟನಾ ಟೆಂಟನ್ನು ತಮ್ಮ ವಶಕ್ಕೆ ತೆಗೆದುಕೊಂಡರು.