ಇಎನ್ಎಲ್ ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಶೇ.71 ರಷ್ಟು ಮತದಾನವಾಗಿದ್ದು, ಈ ಬಾರಿ ಇನ್ನೂ ಹೆಚ್ಚಿನ ಶೇಕಡಾವಾರು ಮತದಾನ ಆಗುವಂತೆ ಎಲ್ಲರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಡಾ: ಪಿ.ಎಸ್. ವಸ್ತ್ರದ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು (ಏ.26) ಜರುಗಿದ ಮತದಾನದ ಜಾಗೃತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಈ ಬಾರಿ ಶೇ.10 ರಷ್ಟು ಹೆಚ್ಚಿಗೆ ಮತದಾನವಾಗುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಬಿಎಲ್ಓ ಗಳು ಮತದಾರರ ಮನೆಮನೆಗೆ ತೆರಳಿದಾಗ ಮತ ಜಾಗೃತಿ ಮೂಡಿಸುವುದಲ್ಲದೇ ಈ ಬಾರಿ ಬಿಸಿಲಿನಲ್ಲಿ ಸಾಲುಗಟ್ಟಿ ನಿಲ್ಲುವುದನ್ನು ತಡೆಯಲು ಮತ ಕೇಂದ್ರದ ಪಕ್ಕದಲ್ಲೇ ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಯಾವುದೇ ಸಮಸ್ಯೆ ಇದ್ದಲ್ಲಿ ಮತದಾರರು 1950 ಸಂಪರ್ಕಿಸುವ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಚುನಾವಣಾ ಆಯೋಗವು ವಿಕಲಚೇತನರು ಮತ್ತು 80 ವರ್ಷಗಳ ವಯೋಮಾನದ ವೃದ್ಧರಿಗೆ ಮನೆಯಲ್ಲಿಯೆ ಮತದಾನ ಮಾಡುವ ವ್ಯವಸ್ಥೆಮಾಡಿದೆ. ಪ್ರತಿಯೊಬ್ಬರು ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಮತಗಟ್ಟೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮತದಾನದ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುವ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಸ್ವರೂಪ ಟಿ.ಕೆ. ಅವರು ಮಾತನಾಡಿ, ಬಿತ್ತಿಪತ್ರ, ಸಾಮಾಜಿಕ ಜಾಲತಾಣ, ಜಿಂಗಲ್ಸ್, ಹಾಡುಗಳು, ಕಿರು ಚಿತ್ರಗಳು, ಬೈಕ್ ರ್ಯಾಲಿ, ಗಾಳಿಪಟ ಉತ್ಸವ, ಮೇಣದ ಬತ್ತಿ ಮತ್ತು ಮೊಬೈಲ್ ಟಾರ್ಚ್, ಪಂಜಿನ ಮೆರವಣಿಗೆ, ಮಾನವ ಸರಪಳಿ, ಸಹಿ ಅಭಿಯಾನ, ರಂಗೋಲಿ ಮತ್ತು ಮೆಹೆಂದಿ, ನರೇಗಾ ಸ್ಥಳಗಳಲ್ಲಿ, ತೃತೀಯ ಲಿಂಗಿಗಳ ಜಾಥಾ, ಪ್ಯಾಷನ್ ಶೋ ಇಂತಹ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ. ಮೇ. 5 ರಂದು ಮತದಾನದ ಜಾಗೃತಿಗಾಗಿ ಪ್ಯಾಷನ್ ಷೋ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಸವಲಿಂಗ ಮೂಗನೂರಮಠ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.