ಇಎನ್ಎಲ್ ಹುಬ್ಬಳ್ಳಿ:
ರಾಜಕೀಯ, ಪ್ರೇಮಿಸಿ ವಿವಾಹವಾದ ಕಾರಣಕ್ಕಾಗಿ ಹಳೇ ಹುಬ್ಬಳ್ಳಿ ವ್ಯಾಪ್ತಿಯ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯನನ್ನು ತಲವಾರ್, ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.
ರಾಯನಾಳ ಗ್ರಾಪಂ ಗಂಗಿವಾಳ ವಾರ್ಡ್’ನ ಬಿಜೆಪಿ ಬೆಂಬಲಿತ ಸದಸ್ಯ ದೀಪಕ ಶಿವಾಜಿ ಪಟಾದಾರಿ ಎಂಬಾತನನ್ನು (32) ಚಾಕು, ತಲ್ವಾರ್ ನಿಂದ ಹೊಡೆದ ದುಷ್ಕರ್ಮಿಗಳು ಗಂಭೀರ ಗಾಯಗೊಳಿಸಿದ್ದರು. ಸ್ಥಳೀಯರು ಆತನನ್ನು ತಕ್ಷಣ ಕಿಮ್ಸ್ ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಪ್ರವೀಣ್ ಮುದಲಿಂಗನವರ, ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಶಿವು ಮೇಟಿ ಆರೋಪಿಗಳು. ಇವರಲ್ಲಿ ಕೆಲವರನ್ನು ಪೊಲೀಸರು ತಂಡ ರಾತ್ರಿಯೇ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದೂವರೆ ವರ್ಷದ ಹಿಂದೆ ಮೇಟಿ ಕುಟುಂಬದ ಯುವತಿಯನ್ನು ದೀಪಕ ವಿವಾಹ ಆಗಿದ್ದ ಎನ್ನಲಾಗಿದೆ. ಅಲ್ಲದೆ, ಈಚೆಗೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೇಲಿನ ಅವಿಶ್ವಾಸ ನಿರ್ಣಯದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಸಂಬಂಧಿಕರು, ಸ್ನೇಹಿತರು ವ್ಯಕ್ತಪಡಿಸಿದ್ದಾರೆ.
ಮೃತನ ಸಹೋದರ ಸಂಜಯ ಪಟಾದಾರಿಯಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.