ಇಎನ್ಎಲ್ ಹುಬ್ಬಳ್ಳಿ: ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ವೈದ್ಯೆಗೆ ₹ 50ಲಕ್ಷ ವಂಚನೆ ಮಾಡಿರುವ ಕುರಿತು ಇಲ್ಲಿನ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಗೋಕುಲ ರುದ್ರಗಂಗಾ ಲೈಔಟ್ ನಿವಾಸಿ ಶೈಲಾ ಪಾಟೀಲ ಅವರು ಕೇರಳ ಮೂಲದ ಮಣಿಕಂಠನ್ ಕುಟ್ಟತ್ ಗೋಪಾಲನ್ ನಾಯರ್ ಹಾಗೂ ಕಲ್ಯಾಣಿ ಕುಟ್ಟತ್ ವಿರುದ್ಧ ದೂರು ನೀಡಿದ್ದಾರೆ.
ಕಲಘಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ಶೈಲಾ ಇವರು ಸ್ವಯಂ ನಿವೃತ್ತಿ ಪಡೆದಿದ್ದರು. ಸದ್ಯ ಹುಬ್ಬಳ್ಳಿಯಲ್ಲಿ ಖಾಸಗಿ ವೈದ್ಯಕೀಯ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ವಿಆರ್’ಎಸ್ ನಿಂದ ಬಂದ 38 ಲಕ್ಷ ರು. ಹಣಕ್ಕೆ ಇನ್ನೊಂದಿಷ್ಟು ಹಣ ಸೇರಿಸಿ ಹೂಡಿಕೆ ಮಾಡಲು ಮುಂದಾಗಿ ಕೈ ಸುಟ್ಟು ಕೊಂಡಿದ್ದಾರೆ!
ತಮಗೆ ಅಂಗವಿಕಲ ಮಗ ಇರುವ ಕಾರಣದಿಂದ ನೆರವಾಗಲೆಂದು ಹೂಡಿಕೆ ಮಾಡಲು ಯತ್ನಿಸಿದ್ದಾರೆ. ಅದಕ್ಕಾಗಿ ಹೂಡಿಕೆ ಬಗ್ಗೆ ತಮ್ಮ ಸ್ನೇಹಿತರಿಂದ ಸಲಹೆ ಪಡೆದಿದ್ದರು. ವಿದ್ಯಾನಗರದ ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್ನ ಹಣ ಹೂಡಿಕೆ ಮಾಡಲು ಪರಿಚಯಿಸಿದ್ದರು. ಸಂಸ್ಥೆ ಸಿಇಒ ಮಣಿಕಂಠನ್ ಕುಟ್ಟತ್ ಗೋಪಾಲನ್ ನಾಯರ್ ಕಳೆದ 2019ರಿಂದ 2022ರ ಜನವರಿವರೆಗೆ ಮನೆಗೆ ಬಂದು ವಿದ್ಯಾನಗರದಲ್ಲಿ ನಮ್ಮ ಸಂಸ್ಥೆ ಕಚೇರಿ ಇದ ಎಂದು ₹ 50ಲಕ್ಷ ರು. ಪಡೆದಿದ್ದರು. ಅಲ್ಲದೇ ಹಣವನ್ನು ಆದಿತ್ಯ ಬಿರ್ಲಾ ಸನ್ ಲೈಫ್ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿದ್ದರು. ಜೊತೆಗೆ ದೇಶಪಾಂಡೆ ನಗರದ ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿನ ತನ್ನ ಖಾತೆಯಲ್ಲಿ ಹಣ ಇಲ್ಲದಿದ್ದರೂ ₹20 ಲಕ್ಷ ಚೆಕ್ ನೀಡಿದ್ದ. ಆದರೆ ಎಲ್ಲೂ ಹಣ ಹೂಡಿಕೆ ಮಾಡದೆ ನಮ್ಮ ಹಣವನ್ನು ಬಳಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.