ಇಎನ್ಎಲ್ ಅಣ್ಣಿಗೇರಿ:
ವಾಯುಭಾರ ಕುಸಿತದ ಪರಿಣಾಮ ಅಕಾಲಿಕ ಮಳೆಯಿಂದ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು ಸರ್ಕಾರ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಪಕ್ಷಾತೀತ ರೈತ ಸಂಘದವರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ನಿಂಗಪ್ಪ ಬಡ್ಡೆಪ್ಪನವರ ಮಾತನಾಡಿ, ಅತಿವೃಷ್ಟಿ ಮಳೆಗೆ ಮೆಣಸಿನಕಾಯಿ, ಗೋದಿ, ಕಡಲೆ, ಹತ್ತಿ, ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೈಗುಟುಕುವ ಹೊತ್ತಿನಲ್ಲಿ ಪೈರು ನೀರುಪಾಲಾಗಿದೆ. ಸಾಲಬಾಧೆಯಿಂದ ತತ್ತರಿಸಿರುವ ರೈತರು ಪರದಾಡುವಂತಾಗಿದೆ.
ಸರ್ಕಾರ ಹತ್ತಿ ಬೆಂಬಲ ಬೆಲೆಯನ್ನು 7 ಸಾವಿರಕ್ಕೆ ಖರೀದಿಸುವ ಬದಲು 10ಸಾವಿರಕ್ಕೆ ಏರಿಸಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ 3 ಕೃಷಿ ಕಾಯ್ದೆಗಳನ್ನು ಹಿಂಪಡೆದ ಪ್ರಧಾನಿಯವರನ್ನು ಅಭಿನಂದಿಸಿದರು. ರೈತ ಹೋರಾಟದಲ್ಲಿ ಮೃತಪಟ್ಟ ರೈತರಿಗೆ 25 ಲಕ್ಷ ರೂಗಳನ್ನು ನೀಡುವ ಮೂಲಕ ರೈತರನ್ನು ಹುತಾತ್ಮರೆಂದು ಘೋಷಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷಾತೀತ ರೈತ ಹೋರಾಟ ಸಮಿತಿ ಮುಖಂಡರಾದ ದ್ಯಾಮಣ್ಣ ಕೊಗ್ಗಿ, ಭಗವಂತ ಪುಟ್ಟಣ್ಣವರ, ವಿನಾಯಕ ನಲವಡಿ, ನಿಜಗುಣೆಪ್ಪ ಅಕ್ಕಿ, ಶಂಕ್ರಪ್ಪ ಮಾಯಣ್ಣವರ, ಯಲ್ಲಪ್ಪ ಕೊಗ್ಗಿ, ಹನಮಂತಪ್ಪ ಕರೆಟ್ಟನವರ,ರೈತ ಸಂಘದ ಪದಾಧಕಾರಿಗಳು ಉಪಸ್ಥಿತರಿದ್ದರು.