ಇಎನ್ಎಲ್ ಧಾರವಾಡ: ಹುಬ್ಬಳ್ಳಿಯಲ್ಲಿ ನಡೆಯಲಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಬರೋಬ್ಬರಿ11 ವರ್ಷಗಳ ನಂತರ ವಾಣಿಜ್ಯ ನಗರಿ ಬಿಜೆಪಿಯ ರಾಜ್ಯಮಟ್ಟದ ಸಭೆಗೆ ವೇದಿಕೆ ಆಗಿದೆ. ಇಲ್ಲಿನ ಡೆನಿಸನ್ಸ್ ಹೊಟೆಲ್ ನಲ್ಲಿ ಕಾರ್ಯಕಾರಿಣಿ ನಡೆಯಲಿದೆ.
ವಿಧಾನ ಪರಿಷತ್, ಉಪಚುನಾವಣೆ ಸೋಲು, ಗೆಲುವು, ಪಕ್ಷದ ಸಂಘಟನೆ, ಭಿನ್ನಾಭಿಪ್ರಾಯ, ಸಿಎಂ ಬದಲಾವಣೆ ಗುಸುಗುಸು, ಮುಂದಿನ ಚುನಾವಣೆಗೆ ಈಗಲೇ ಸಿದ್ಧತೆ ಸೇರಿ ಸಾಕಷ್ಟು ವಿಚಾರಗಳು ಚರ್ಚೆ ಆಗಲಿವೆ.
ರಾಜ್ಯ ಉಸ್ತುವಾರಿ ಅರುಣಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿ ಸಾಕಷ್ಟು ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಹುಬ್ಬಳ್ಳಿ ನಗರ ಸಂಪೂರ್ಣ ಕೇಸರಿಮಯ ಆಗಿದೆ. ಬಿಜೆಪಿ ಫ್ಲೆಕ್ಸ್, ಮುಖಂಡರ ಕಟೌಟ್, ಬಿಜೆಪಿ ಬಾವುಟ ನಗರದೆಲ್ಲೆಡೆ ರಾರಾಜಿಸುತ್ತಿದೆ. ಕೆಲವೆಡೆ ಕಟೌಟ್ ಅಳವಡಿಸಿದ ಬಗ್ಗೆ ಜನತೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.