ವಚನ ಹೂಗಾರ
ಇಎನ್ಎಲ್ ಅಣ್ಣಿಗೇರಿ:
ಆದಿಕವಿ ಪಂಪನ ತವರಿನ ಐತಿಹಾಸಿಕ ಪ್ರಸಿದ್ಧ ಅಮೃತೇಶ್ವರನ ಜಾತ್ರಾ ಮಹೋತ್ಸವ ಹೊಸ್ತಿಲ ಹುಣ್ಣಿಮೆ ದಿನ ಡಿ.18 ರಂದು ಜರುಗಲಿದ್ದು,ಡಿ .17 ಶುಕ್ರವಾರ ರಾತ್ರಿ 7 ಗಂಟೆಗೆ ಪಾರ್ವತಿ ಸಮೇತ ಅಮೃತೇಶ್ವರ ಕಲ್ಯಾಣ ಉತ್ಸವ ನಡೆಯಲಿದೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಪ್ರದಾಯದ ಪ್ರಕಾರ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆ ದಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯುತ್ತದೆ.
ಅದಕ್ಕೂ ಮುನ್ನ ಆರು ದಿನ ಶುಕ್ಲ ದಶಮಿಯಿಂದ ಚತುರ್ದಶಿಯವರೆಗೆ ದೇವರಿಗೆ ನಿತ್ಯ ಪಂಚಾಮೃತ ಅಭಿಷೇಕ , ಪುರಾಣ, ಕೀರ್ತನೆ, ಮಂತ್ರ ಪುಷ್ಪ ಪ್ರತಿದಿನ ನಡೆದು ಒಂದೊಂದು ವಾಹನೋತ್ಸವ ಜರುಗುತ್ತದೆ.
ಕೊನೆಯ ದಿನ ಹುಣ್ಣಿಮೆಯ ರಥೋತ್ಸವ ಬೆಳಗ್ಗೆ 11-30ಕ್ಕೆ ಗುಡಿಯ ಮುಂಭಾಗದಿoದ ದೇವರ ರಥೋತ್ಸವ ಆರಂಭ ಆಗುತ್ತದೆ. ಅಲಂಕೃತಗೊoಡ ರಥ ಪೇಟೆಯಲ್ಲಿರುವ ಸಿದ್ಧಲಿಂಗೇಶ್ವರ ಗುಡಿಯವರೆಗೆ ಹೋಗುತ್ತದೆ. ಬಳಿಕ ಅನ್ನಸಂತರ್ಪಣೆ, ಅಂದೇ ಸಂಜೆ ದೈವದವರು ರಥವನ್ನು ಮರಳಿ ಗುಡಿಯ ಹತ್ತಿರ ತರುವರು. ನಾಡಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಅಮೃತೇಶ್ವರ ಉಗಮ:
ಅಮೃತೇಶ್ವರ ಸ್ವಯಂಭೂ ಮೂಡಿದ ಲಿಂಗವೆಂದು ಪುರಾಣದಲ್ಲಿ ಹೇಳಲಾಗಿದೆ. ಬ್ರಹ್ಮನು ಅನ್ನಸಂತರ್ಪಣೆ ಸಂಕಲ್ಪ ಮಾಡುತ್ತಲೆ ಅನ್ನದ ಗಿರಿಯೇ ಅಲ್ಲಿ ಉಂಟಾಯಿತು. ಈ ಕ್ಷೇತ್ರಕ್ಕೆ ಅನ್ನಗಿರಿಯೆಂದು ಅಮೃತ ಅಭಿಷೇಕದಿಂದ ಉಧ್ವವವಾದ ಕಾರಣ ಲಿಂಗಕ್ಕೆ ಅಮೃತೇಶ್ವರ ಎಂದು ನಾಮಕರಣ ಆಗಿದೆ ಎಂಬುದು ನಂಬಿಕೆ.
ದೇವಸ್ಥಾನದ ಶಿಲ್ಪಕಲೆ:
ಕ್ರಿ.ಶ.10ನೇ ಶತಮಾನದ ಕಲ್ಯಾಣದ ಚಾಲುಕ್ಯರ ವಾಸ್ತು ಮಾದರಿಯಲ್ಲಿ ಕರಿಯ ಕಲ್ಲಿನಿಂದ ದೇವಾಲಯ ನಿರ್ಮಿಸಲಾಗಿದ್ದು, ದಕ್ಷಿಣಾಭಿಮುಖವಾಗಿದೆ. ದಕ್ಷಿಣೋತ್ತರ ಗೋಡೆ , ಒಳ ಮಗ್ಗಲುಗಳ ಅಂತರ ಸುಮಾರು 80 ಅಡಿ, ಪೂರ್ವ ಪಶ್ಚಿಮ ಗೋಡೆಗಳ ಒಳ ಅಂತರ 120 ಅಡಿ, ಪ್ರಾಕಾರ ಗೋಡೆಯ ಮೇಲ್ಗಡೆಗೆ ತೆನೆಗಳಿವೆ. ಹೊರ ಮಂಟಪದಲ್ಲಿ ಒಟ್ಟು 18 ಕಂಬಗಳಿವೆ.
ಒಳಮಂಟಪ:
ಮುಖ್ಯ ಗುಡಿಯ ಪೂರ್ವ ಪಶ್ಚಿಮ 80 ಅಡಿಯಿದ್ದು, ದಕ್ಷಿಣದ ಕಡೆಗೆ 6 ಕಂಬ ಮತ್ತು 2 ಅರ್ಧಗಂಬದ ಮೇಲೆ ನಿಂತ ಒಂದು ಅರ್ಧ ಮಂಟಪವಿದ್ದು, ಶಿಲ್ಪಕಲೆಯನ್ನು ಸುಂದರವಾಗಿ, ಸೂಕ್ಷ್ಮವಾಗಿ ಕೆತ್ತಲಾಗಿದೆ.
ಕಲ್ಲಿನಲ್ಲಿ ಕೌಶಲ್ಯದಿಂದ ಮಾಡಿದ ಸುಳಿವಿನ ಕೆಲಸ ಬಂಗಾರದಲ್ಲಿ ಅಥವಾ ದಂತದಲ್ಲಿ ಮಾಡಿದ ಕುಸುರಿನ ಕೆಲಸ ಹೊಲುತ್ತದೆ.
ಅಮೃತೇಶ್ವರ ಲಿಂಗ:
ಗರ್ಭಗುಡಿಯ ಮಧ್ಯದಲ್ಲಿದ್ದು ಪಾನ ಬಟ್ಟಲಕ್ಕೆ ಉತ್ತರ ಕಡೆ ಜಲಹರಿಯಿದೆ. ಎರಡು ಅಡಿ ಎತ್ತರ ಲಿಂಗವಿದೆ.
ಹೊರಗಿನ ಮಂಟಪ:
60 ಅಡಿ ಪೂರ್ವ ಪಶ್ಚಿಮ , 50 ಅಡಿ ದಕ್ಷಿಣೋತ್ತರವಾಗಿ 34 ಕಂಬಗಳಿವೆ. ದುಂಡು ಚೌಕಾಕಾರದಲ್ಲಿವೆ. ಅಮೃತೇಶ್ವರ ಎದುರು ನಂದಿಯನ್ನು ಸ್ಥಾಪಿಸಲಾಗಿದೆ.