ಮೇ 27ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆ
ಇಎನ್ಎಲ್ ನವದೆಹಲಿ: ಮುಂಗಾರು ಮಳೆ ಈ ಬಾರಿ ವಾಡಿಕೆಗೆ ಮುನ್ನವೇ ಕೇರಳ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1ರಂದು ನೈರುತ್ಯ ಮುಂಗಾರು ಕೇರಳ ಪ್ರವೇಶಿಸುತ್ತದೆ. ಪ್ರಸಕ್ತ ವರ್ಷ 5 ದಿನ ಮೊದಲೇ ಅಂದರೆ ಮೇ 27ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ. ( 2009ರಲ್ಲಿ ನೈಋತ್ಯ ಮಾನ್ಸೂನ್ ಮೇ 23ರಂದು ಕೇರಳ ಪ್ರವೇಶಿಸಿತ್ತು.)
ಹಾಗೆಯೇ ನೈರುತ್ಯ ಮುಂಗಾರು ಮಾರುತವು ಮೇ 15ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಿ, ಮುಂದುವರಿಯಲು ಪೂರಕ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಬಿಸಿಲ ಧಗೆ ಹೆಚ್ಚುತ್ತಿರುವ ಸಮಯದಲ್ಲೇ ಅವಧಿಪೂರ್ವ ಮುಂಗಾರು ಆರಂಭದ ಸುಳಿವು ಲಭ್ಯವಾಗಿದೆ.