37 C
Hubli
ಏಪ್ರಿಲ್ 25, 2024
eNews Land
ದೇಶ ರಾಜಕೀಯ ರಾಜ್ಯ

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಪೂರಕ: ಜೆ.ಪಿ.ನಡ್ಡಾ

ಇಎನ್ಎಲ್ ಬೆಂಗಳೂರು: ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಪೂರಕ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಿಳಿಸಿದರು.

ನಗರದ “ಹೋಟೆಲ್ ಶಾಂಗ್ರಿಲಾ”ದಲ್ಲಿ ಏರ್ಪಡಿಸಿದ್ದ ‘ಬಿಜೆಪಿ ಪ್ರಣಾಳಿಕೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನ್ನ, ಅಕ್ಷರ, ಆರೋಗ್ಯ, ಆದಾಯ, ಅಭಯ, ಅಭಿವೃದ್ಧಿಯ ಆರು ವಿಭಾಗದಡಿ ಪ್ರಣಾಳಿಕೆ ಸಿದ್ಧಗೊಂಡಿದೆ. ಕರ್ನಾಟಕದ ಅಭಿವೃದ್ಧಿಗಾಗಿ ಇದು ಸಿದ್ಧವಿದೆ. ಅಮೃತ ಕಾಲಕ್ಕೆ ಪೂರಕ ಪ್ರಣಾಳಿಕೆ. ಪವರ್‍ಫುಲ್ ಡಬಲ್ ಎಂಜಿನ್ ನಮ್ಮದು. ಜನಸೇವಕ ಯೋಜನೆಯಡಿ ಕೇಂದ್ರ- ರಾಜ್ಯ ಯೋಜನೆಗಳ ಅನುಷ್ಠಾನ ಆಗಲಿದೆ ಎಂದರು.
ಅನ್ನ ಯೋಜನೆಯಡಿ 3 ಉಚಿತ ಸಿಲಿಂಡರ್, ಅಟಲ್ ಆಹಾರ ಕೇಂದ್ರ ಸ್ಥಾಪನೆ, ಪೋಷಣಾ ಯೋಜನೆಯಡಿ ನಂದಿನಿ ಅರ್ಧ ಲೀ. ಹಾಲು ವಿತರಣೆ ನಡೆಯಲಿದೆ. ಅಭಯದಡಿ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿ ಮಾಡಲಿದ್ದೇವೆ. ಅರ್ಹರಿಗೆ ನಿವೇಶನ ವಿತರಣೆ, ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಸ್ಥಾಪನೆ, ಅಪಾರ್ಟ್‍ಮೆಂಟ್ ಸಮಸ್ಯೆ ಪರಿಹಾರ ಮಾಡಲಿದ್ದೇವೆ. ಅಕ್ಷರದಡಿ ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಜಾರಿ ಮಾಡಲಿದ್ದೇವೆ. ಯುವಕರಿಗೆ ಪ್ರೋತ್ಸಾಹ ಕೊಡಲಾಗುವುದು. ಆರೋಗ್ಯದಡಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಉತ್ತೇಜನ ನೀಡುತ್ತೇವೆ ಎಂದು ತಿಳಿಸಿದರು.
ಅಭಿವೃದ್ಧಿಗಾಗಿ ಸ್ಟೇಟ್ ಕ್ಯಾಪಿಟಲ್ ರೀಜನ್ ಸ್ಥಾಪಿಸುತ್ತೇವೆ. ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುತ್ತೇವೆ. 30 ಸಾವಿರ ಕೋಟಿಯನ್ನು ಅಗ್ರಿಕಲ್ಚರ್ ಫಂಡ್ ಸ್ಥಾಪಿಸಿ ಕೃಷಿ ಉತ್ತೇಜನ ನೀಡುತ್ತೇವೆ ಎಂದು ವಿವರಿಸಿದರು. ಆದಾಯದಡಿ 1500 ಕೋಟಿಯನ್ನು ಮೀಸಲಿಡಲಾಗುತ್ತದೆ. ಕರ್ನಾಟಕವನ್ನು ಪ್ರವಾಸಿ ತಾಣವಾಗಿ ಮಾಡಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಜನರ ಬಗ್ಗೆ ಮೊಸಳೆಕಣ್ಣೀರನ್ನಷ್ಟೇ ಸುರಿಸಿತ್ತು. ನಮ್ಮದು ಜನರ ಪ್ರಣಾಳಿಕೆ. ಇದು ಮೋದಿಜಿ ಅವರು ವಿಕಸಿತ ಭಾರತದ ದೂರದೃಷ್ಟಿಯನ್ನು ಹೊಂದಿದೆ. ಅಮೃತಕಾಲದಲ್ಲಿ ಹೊಸ ಕರ್ನಾಟಕದ ಚಿಂತನೆ ಅದರಲ್ಲಿದೆ. ಕಾಂಗ್ರೆಸ್ ವಾರಂಟಿ ಇಲ್ಲದ ಪಕ್ಷ. ಆದರೂ ಅದು ಗ್ಯಾರಂಟಿಗಳನ್ನು ನೀಡುತ್ತಿದೆ. ವಾಸ್ತವಿಕ ಭರವಸೆಗಳನ್ನು ನೀಡಲಾಗಿದೆ. ಜನರೆಲ್ಲರ ಆಶೋತ್ತರಗಳನ್ನು ಈಡೇರಿಸಲು ಅದು ಬದ್ಧತೆ ಹೊಂದಿದೆ ಎಂದರು.
ಸ್ಥಳೀಯ ಸಂಸ್ಕøತಿ ರಕ್ಷಣೆಗಾಗಿ ಗೋರಕ್ಷಣಾ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ. ಅಂಜನಾದ್ರಿ, ಅನುಭವ ಮಂಟಪಗಳ ಅಭಿವೃದ್ಧಿ, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಬಿಜೆಪಿ ಸರಕಾರವು ಕೋವಿಡ್ ಸಾಂಕ್ರಾಮಿಕ, ಅತಿವೃಷ್ಟಿಯನ್ನು ಸಮರ್ಥವಾಗಿ ಎದುರಿಸಿ ಅವಕಾಶಗಳನ್ನಾಗಿ ಬದಲಾಯಿಸಿ ಕರ್ನಾಟಕವನ್ನು ಸದೃಢ ರಾಜ್ಯವಾಗಿ ಮಾಡಿದ್ದಾರೆ. 6 ವರ್ಷ ಕಾಂಗ್ರೆಸ್ ಕೆಟ್ಟ ಆಡಳಿತ ನೀಡಿತ್ತು. ಸಿದ್ದರಾಮಯ್ಯ ಸರಕಾರ ರಿವರ್ಸ್ ಗೇರ್ ಸರಕಾರ ಎಂದು ಟೀಕಿಸಿದ ಅವರು, ಭ್ರಷ್ಟ, ತುಷ್ಟೀಕರಣದ ಸರಕಾರ ಅದಾಗಿತ್ತು ಎಂದು ಟೀಕಿಸಿದರು.
2014-19ರ ಅವಧಿಯಲ್ಲಿ ನರೇಂದ್ರ ಮೋದಿಜಿ ಅವರ ವಿವಿಧ ಯೋಜನೆಗಳು ಸ್ಥಗಿತಗೊಂಡಿದ್ದವು. ಕಿಸಾನ್ ಸಮ್ಮಾನ್ ನಿಧಿಯಡಿ ಸಿದ್ದರಾಮಯ್ಯ ಸರಕಾರ 17 ಹೆಸರನ್ನು ಕಳುಹಿಸಿತ್ತು. ಯಡಿಯೂರಪ್ಪ, ಬೊಮ್ಮಾಯಿಯವರ 15 ಸಾವಿರ ಕೋಟಿ ಹಣವನ್ನು 57 ಲಕ್ಷ ರೈತರಿಗೆ ಕೊಡಲಾಗಿದೆ. 4 ಸಾವಿರವನ್ನು ಹೆಚ್ಚುವರಿಯಾಗಿ ಕೊಡಲಾಗಿದೆ ಎಂದು ವಿವರಿಸಿದರು.
ಯಶಸ್ವಿನಿ ವಿಮೆ ಯೋಜನೆ ಸ್ಥಗಿತಗೊಳಿಸಿದ್ದನ್ನು ನಾವು ಮತ್ತೆ ಆರಂಭಿಸಿದ್ದೇವೆ. ನಾವು ಅಭಿವೃದ್ಧಿಗಾಗಿ ಇದ್ದೇವೆ. ಅವರದು ರಿವರ್ಸ್ ಗೇರ್. ಭಾಗ್ಯಲಕ್ಷ್ಮಿ ಯೋಜನೆಯನ್ನು ಜನವಿರೋಧಿ ಕಾಂಗ್ರೆಸ್ ಸರಕಾರ ಸರಿಯಾಗಿ ಅನುಷ್ಠಾನಗೊಳಿಸಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‍ನಡಿ ಭಯೋತ್ಪಾದನೆಗೆ ಪ್ರೋತ್ಸಾಹ ಕೊಡಲಾಗುತ್ತಿತ್ತು. ಆಗ, ಬೆಂಗಳೂರು ಮಹಿಳೆಯರಿಗೆ ಅಸುರಕ್ಷಿತ ಎಂಬ ಸ್ಥಿತಿ ಇತ್ತು ಎಂದು ವಿವರಿಸಿದರು. ಆದರೆ, ನಮ್ಮ ಸರಕಾರದಲ್ಲಿ ವಿದ್ಯಾನಿಧಿಯಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನ ಲಭಿಸಿದೆ ಎಂದರು. ಪ್ರಣಾಳಿಕೆಯನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಸಿದ್ಧಪಡಿಸಿಲ್ಲ. ಕಾರ್ಯಕರ್ತರು ಮೂಲೆಮೂಲೆಗಳಿಂದ ಅಭಿಪ್ರಾಯ ಸಂಗ್ರಹಿಸಿ ಇದನ್ನು ಸಿದ್ಧಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಆರ್ಥಿಕ ಸಮಾನತೆಯ ಜೊತೆ ಸಾಮಾಜಿಕ ಸಮಾನತೆ ಲಭಿಸಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಾಗಿದೆ. ತುಷ್ಟೀಕರಣ ರಹಿತವಾಗಿ ಎಲ್ಲರಿಗೂ ನ್ಯಾಯ ನೀಡಿದ ಬಿಜೆಪಿ ಸರಕಾರ ನಮ್ಮದು. ಅಪ್ಪರ್ ಭದ್ರಾಗೆ 5300 ಕೋಟಿ ಕೊಟ್ಟಿದ್ದೇವೆ. ಕಳಸಾ ಬಂಡೂರಿ ಯೋಜನೆಗೆ 1 ಸಾವಿರ ಕೋಟಿಯನ್ನು ಕೊಡಲಾಗಿದೆ. ಬೆಂಗಳೂರು ಸಬರ್ಬನ್ ರೈಲು ಯೋಜನೆಗೆ 15 ಸಾವಿರ ಕೋಟಿ ಮೀಸಲಿಡಲಾಗಿದೆ. ಲಂಬಾಣಿ ತಾಂಡಾ, ಕುರುಬರ ಹಟ್ಟಿಯವರಿಗೆ 1.75 ಲಕ್ಷ ಜನರಿಗೆ ಹಕ್ಕುಪತ್ರ ಕೊಡಲಾಗಿದೆ ಎಂದರು.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಎನ್‍ಇಪಿ ಜಾರಿಯಲ್ಲಿ ಮೊದಲನೇ ಸ್ಥಾನ, ಹಲವು ವಿವಿಗಳ ಸ್ಥಾಪನೆ ಕುರಿತು ಮಾಹಿತಿ ನೀಡಿದರು. ಅತ್ಯುತ್ತಮ ಆರೋಗ್ಯ ಕ್ಷೇತ್ರವನ್ನು ಕರ್ನಾಟಕ ಹೊಂದಿದೆ. ಆರೋಗ್ಯ ಕರ್ನಾಟಕ ಮೂಲಕ ಜನರನ್ನು ತಲುಪಲಾಗಿದೆ ಎಂದು ತಿಳಿಸಿದರು.
ಎಫ್‍ಡಿಐಯಡಿ ಮೊದಲನೇ ಸ್ಥಾನ ನಮ್ಮದಾಗಿದೆ. ಶಿವಮೊಗ್ಗ ವಿಮಾನನಿಲ್ದಾಣದ ಅಭಿವೃದ್ಧಿಯನ್ನು ಕಡೆಗಣಿಸಲಾಗಿತ್ತು. ಆದರೆ, ನಾವು ಆ ವಿಮಾನನಿಲ್ದಾಣ ಉದ್ಘಾಟಿಸಿದ್ದೇವೆ. ಕಲಬುರ್ಗಿ ವಿಮಾನನಿಲ್ದಾಣ ಆರಂಭವಾಗಿದೆ. 6 ಹೊಸ ವಿಮಾನನಿಲ್ದಾಣ ಆರಂಭಗೊಳ್ಳಲಿದೆ. 9 ಪಟ್ಟು ಹೆಚ್ಚು ಅನುದಾನವನ್ನು ರೈಲ್ವೆ ಕ್ಷೇತ್ರಕ್ಕೆ ಕೊಡಲಾಗಿದೆ ಎಂದರು.
ಕೇಂದ್ರೀಯ ಸಂಸದೀ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಅತ್ಯಂತ ಒಳ್ಳೆಯ ಪ್ರಣಾಳಿಕೆ ಇದಾಗಿದೆ. ಎಲ್ಲ ವರ್ಗದ ಜನರಿಗೆ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಇದರ ಮಾಹಿತಿಯನ್ನು ಜನರಿಗೆ ನೀಡಿ ಮತ್ತೆ ಬಿಜೆಪಿ 125- 130 ಸೀಟು ಗೆದ್ದು ಸರಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕಳೆದ ಕೆಲವು ತಿಂಗಳುಗಳಿಂದ ಜನರ ಅಭಿಮತ, ತಜ್ಞರ ಸಲಹೆಯೊಂದಿಗೆ ಜನರ ಭಾವನೆ ಅಳವಡಿಸಿ ಪ್ರಜಾಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಕಳೆದ ಬಾರಿ ಕೋವಿಡ್ ನಿರ್ವಹಣೆ, ಆರ್ಥಿಕ ಕುಸಿತ, ಜನಜೀವನ ಅಸ್ತವ್ಯಸ್ಥ ಇದ್ದರೂ ಅದನ್ನು ನಿಭಾಯಿಸಿದ್ದೇವೆ. ಎಲ್ಲ ಅನುಭವಗಳನ್ನು ಕ್ರೋಡೀಕರಿಸಿ ಪ್ರಣಾಳಿಕೆ ನೀಡಿದ್ದೇವೆ. ಕೃಷಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ ಎಂದು ವಿವರಿಸಿದರು.
ಕಿಸಾನ್ ಸಮ್ಮಾನ್‍ನಿಂದ ರೈತ ವಿದ್ಯಾನಿಧಿ ವರೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಶೂನ್ಯ ಬಡ್ಡಿ ಸಾಲದ ಪ್ರಮಾಣ ಹೆಚ್ಚಳ, ಆವರ್ತ ನಿಧಿ ಮಿತಿ ಹೆಚ್ಚಳ, ರೈತರಿಗೆ ವಿಮೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ, ಅಗ್ರೊ ಫಂಡ್ ಆರಂಭ, ಸಿರಿಧಾನ್ಯಕ್ಕೆ ಒತ್ತು- ಮಹತ್ವ ಕೊಡುವುದು, ಹೈನುಗಾರಿಕೆ, ಮೀನುಗಾರಿಕೆಗೆ ಮಹತ್ವ ಕೊಡಲಾಗಿದೆ ಎಂದು ತಿಳಿಸಿದರು.
ಸಬ್ ಕಾ ಸಾಥ್ ಚಿಂತನೆಯಡಿ ಬಡವರ ಕಲ್ಯಾಣಕ್ಕೆ ಮಹತ್ವ ಕೊಟ್ಟಿದ್ದೇವೆ. ನಗರ ಪ್ರದೇಶದಲ್ಲಿ 5 ಲಕ್ಷ ಮತ್ತು ಗ್ರಾಮೀಣ ಪ್ರದೇಶದಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ಹಾಲು, 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ ಸೇರಿ 10 ಕೆಜಿ ಪಡಿತರ ವಿತರಣೆ ಮಾಡಲಾಗುವುದು ಎಂದರು.
ಘೋಷಣೆಗಾಗಿ ಘೋಷಣೆ, ಚುನಾವಣಾ ಘೋಷಣೆ ಇದಲ್ಲ. ಸಮತೋಲನದ ಆಹಾರ ನೀಡುತ್ತೇವೆ. ಆಯುಷ್ಮಾನ್ ವಿಮೆಯನ್ನು 10 ಲಕ್ಷಕ್ಕೆ ಏರಿಸುತ್ತೇವೆ ಎಂದು ವಿವರಿಸಿದರು. ಹಿರಿಯ ನಾಗರಿಕರ ಆರೋಗ್ಯ ತಪಾಸಣೆ, ತಾಲ್ಲೂಕಿನಲ್ಲಿ ಕಿಮೋಥೆರಪಿ ಡಯಾಲಿಸಿಸ್, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಿದ್ದೇವೆ ಎಂದು ತಿಳಿಸಿದರು. ಜನರಿಂದ ಜನರಿಗಾಗಿ ಜನರಿಗೋಸ್ಕರ ಕಲ್ಯಾಣ ಕರ್ನಾಟಕದ ಪ್ರಣಾಳಿಕೆ ಇದಾಗಿದೆ ಎಂದು ವಿವರ ನೀಡಿದರು. ರಾಜ್ಯವನ್ನು ಸದೃಢ ರಾಜ್ಯವಾಗಿ ಮಾಡಲು 5 ಟ್ರಿಲಿಯನ್ ಡಾಲರ್ ದೇಶದ ಚಿಂತನೆಗೆ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ರಾಜ್ಯ ನಮ್ಮದಾಗಲಿದೆ. ಪ್ರಜಾಪ್ರಣಾಳಿಕೆಗೆ ಜನಬೆಂಬಲ, ಸಂಪೂರ್ಣ ಬಹುಮತ ಖಚಿತ ಎಂದು ತಿಳಿಸಿದರು.
ರಾಜ್ಯದ ಸಚಿವ ಮತ್ತು ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಡಾ|| ಕೆ. ಸುಧಾಕರ್ ಅವರು ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಬೂತ್ ಅಭಿಯಾನ, ಕ್ಷೇತ್ರಗಳ ಸಭೆಗಳಲ್ಲಿ ಸೇರಿ 6 ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಪ್ರಣಾಳಿಕೆ ಸಿದ್ಧಪಡಿಸುವ ಸಭೆಯಲ್ಲಿ ಹಲವು ಕೇಂದ್ರದ ಸಚಿವರು, ವಿಷಯ ತಜ್ಞರು ಭಾಗವಹಿಸಿದ್ದರು. 900 ಸಲಹೆಗಳನ್ನು ತಜ್ಞರಿಂದ ಸ್ವೀಕರಿಸಿದ್ದೇವೆ. 50 ಸೆಕ್ಟೋರಲ್ ತಜ್ಞರೂ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಬೇರೆ ಪಕ್ಷಗಳಂತೆ ಸುಳ್ಳು ಭರವಸೆ ಕೊಡದೆ ನಿರಂತರವಾಗಿ ಕಾರ್ಯಕ್ರಮಗಳ ಆಧಾರದಲ್ಲಿ ಪ್ರಣಾಳಿಕೆ ಕೊಟ್ಟಿದ್ದೇವೆ. ಬೇರೆ ಪಕ್ಷಗಳು 13 ರಾಜ್ಯಗಳಲ್ಲಿ ಸುಳ್ಳು ಭರವಸೆ ನೀಡಿದ್ದರೂ ಅವರನ್ನು ಜನರು ತಿರಸ್ಕರಿಸಿದ್ದಾರೆ. ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಅವರು ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದರು. ಆರೋಗ್ಯಯುಕ್ತ, ಸಂಪದ್ಭರಿತ ರಾಜ್ಯ, ಯುವಕರಿಗೆ ಉದ್ಯೋಗ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಇದು ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋóಷಿ, ಎ. ನಾರಾಯಣಸ್ವಾಮಿ, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯದ ಸಚಿವರಾದ ಆರ್.ಅಶೋಕ್, ಬಿ.ಶ್ರೀರಾಮುಲು, ಡಾ. ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಈಶ್ವರಪ್ಪ, ಅರವಿಂದ ಲಿಂಬಾವಳಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.

Related posts

ರಾಜ್ಯೋತ್ಸವಕ್ಕೆ ಸಿಎಂ ಬೊಮ್ಮಾಯಿ‌ ಚಾಲನೆ

eNEWS LAND Team

ನಾನು ಅಂಬೇಡ್ಕರ್ ವಾದಿ, ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ : ಸಿಎಂ ಬೊಮ್ಮಾಯಿ

eNEWS LAND Team

ಹುಬ್ಬಳ್ಳಿಯಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಹೇಳಿಕೆ ಏನು?

eNEWS LAND Team