ಇಎನ್ಎಲ್ ಬೆಳಗಾವಿ ಡಿ.15: ಹೆಲಿಕಾಪ್ಟರ್ ಪತನದಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೇ 80 ಕ್ಕಿಂತ ಹೆಚ್ವು ಸುಟ್ಟ ಗಾಯಗಳಾಗಿತ್ತು. ವೈದ್ಯರ ಚಿಕಿತ್ಸೆಯ ಹೊರತಾಗಿಯೂ ಅವರು ನಿಧನರಾಗಿದ್ದಾರೆ. ಭಾರತ ಮಾತೆಯ ವೀರ ಯೋಧನನ್ನು ಕಳೆದುಕೊಂಡಿದೆ. ಅವರ ಮರಣದಿಂದ ಭಾರತದ ಸೇನೆ ಮತ್ತು ಜನತೆ ದು:ಖತಪ್ತವಾಗಿದೆ. ಅವರ ಕುಟುಂಬದವರೆಲ್ಲರೂ ಸೈನ್ಯದಲ್ಲಿದ್ದರು. ವೀರ ಯೋಧನ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಕೋರಿದರು.
ವಿಧಾನ ಪರಿಷತ್ತಿನಲ್ಲಿ ಸಚಿವರೊಬ್ಬರ ಕುರಿತು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ ಮುಖ್ಯ ಮಂತ್ರಿಗಳು , ಸದನದ ಒಳಗೆ ಆಗಿರುವ ವಿಷಯಗಳಿಗೆ ಸದನ ಹೊರಗೆ ಉತ್ತರ ನೀಡಲು ಬರುವುದಿಲ್ಲ ಎಂದರು.