ಎಐಸಿಸಿಗೆ ನಾನೇ ಪೂರ್ಣಾವಧಿ ಅಧ್ಯಕ್ಷೆ; ಸೋನಿಯ
ಇಎನ್ಎಲ್ ಬ್ಯೂರೋ
ದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ನಾನೇ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷೆ ಎಂದು ಸೋನಿಯಾ ಗಾಂಧಿ ಅವರು ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಶನಿವಾರ ಹೇಳಿದರು.
ಕೊರೊನಾ ಕಾರಣದಿಂದ ನಡೆಯದೇ ಉಳಿದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಒಂದೂವರೆ ವರ್ಷದ ಬಳಿಕ ಶನಿವಾರ ಆರಂಭವಾಯಿತು.
ಭೌತಿಕವಾಗಿ ನಡೆಯುತ್ತಿರುವ ಈ ಸಭೆಯಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆ, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯಂತಹ ಪ್ರಮುಖ ವಿಷಯಗಳ ಕುರಿತು ಕಾಂಗ್ರೆಸ್ನ ಉನ್ನತ ಮಟ್ಟದ ನಾಯಕರು ಚರ್ಚೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಮೊದಲಿಗೆ ಮಾತನಾಡಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ‘ಇಡೀ ಸಂಘಟನೆ ಕಾಂಗ್ರೆಸ್ನ ಪುನರುಜ್ಜೀವನವನ್ನು ಬಯಸುತ್ತದೆ. ಇದಕ್ಕೆ, ಒಗ್ಗಟ್ಟು, ಪಕ್ಷದ ಹಿತವೇ ಅಂತಿಮ ಎಂಬ ಮನೋಭವಾ ಅಗತ್ಯ. ಎಲ್ಲಕ್ಕಿಂತ ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಅಗತ್ಯವಿದೆ’ ಎಂದು ಅವರು ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸೋನಿಯಾ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು. ‘ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂಬ ಸರ್ಕಾದ ಪ್ರಚಾರದ ಹೊರತಾಗಿಯೂ ದೇಶದ ಆರ್ಥ ವ್ಯವಸ್ಥೆಯು ಕಳವಳಕಾರಿಯಾಗಿದೆ. ರಾಷ್ಟ್ರದ ಆಸ್ತಿ ಮಾರಾಟವೇ, ದೇಶದ ಆರ್ಥ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಇರುವ ಮಾರ್ಗವೆಂದು ಸರ್ಕಾರ ಭಾವಿಸಿಕೊಂಡಂತೆ ಕಾಣುತ್ತಿದೆ,‘ ಎಂದು ಸೋನಿಯಾ ಬೇಸರ ವ್ಯಕ್ತಪಡಿಸಿದ್ದಾರೆ.