ಇಎನ್ಎಲ್ ಧಾರವಾಡ: ‘ಕೋವಿಡ್ ಲಸಿಕೆಯಿಂದ ನಿಮ್ಮ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ನಾವೇ ಜವಾಬ್ದಾರಿ. ಲಸಿಕೆ ತಗೊಳ್ಳಿ!
ಯಲ್ಲಾಪುರ ಓಣಿ ನಿವಾಸಿ ಆನಂದ ಕೊನ್ನೂರಕರ ಎಂಬುವವರಿಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯಿತಿ ಬರೆದುಕೊಟ್ಟ ಮುಚ್ಚಳಿಕೆ ಇದು. ಅಷ್ಟೇ ಅಲ್ಲ, ಅವರಿಗೆ ವಿಶ್ವಾಸ ಮೂಡಿಸಿ ಕೋವ್ಯಾಕ್ಸಿನ್ ಲಸಿಕೆಯನ್ನೂ ನೀಡಲಾಯಿತು.
ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡ ಕಾರಣ ಜಿಲ್ಲಾಧಿಕಾರಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾಧಿಕಾರಿ ಧಾರ್ಮಿಕ ಮುಖಂಡರ ಸಭೆ ನಡೆಸಿದರು. ಈ ವೇಳೆ ಎದ್ದುನಿಂತ ಆನಂದ, ನಮ್ಮ ಕುಟುಂಬ ಸದಸ್ಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ನಾನು ಲಸಿಕೆ ಪಡೆದರೆ ಹೆಚ್ಚು ಕಡಿಮೆಯಾದರೆ ಎನ್ನುವ ಭಯ ಕಾಡುತ್ತಿದೆ. ನನಗೆ ಏನಾದರೂ ಆದರೆ ಕುಟುಂಬದ ಕಥೆಯೇನು? ಜಿಲ್ಲಾಡಳಿತವೇ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಬರೆದುಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿ ಹೇಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಲಸಿಕೆಯಿಂದ ಅಡ್ಡ ಪರಿಣಾಮ ಅಥವಾ ದುಷ್ಪರಿಣಾಮ ಉಂಟಾದರೆ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಡುತ್ತೇವೆ’ ಎಂದರು. ಜಿಲ್ಲಾಧಿಕಾರಿ ಸೂಚನೆಯಂತೆ ತಕಣ ಸಿಬ್ಬಂದಿಯಿಂದ ಮುಚ್ಚಳಿಕೆ ಪತ್ರ ಬರೆಸಿ ಅದಕ್ಕೆ ಸಹಿ ಹಾಕಿದರು.
ಜಿಲ್ಲಾ ಪಂಚಾಯಿತಿ ಸಿಇಒ, ಉಪ ವಿಭಾಗಾಧಿಕಾರಿ ಕೂಡ ಸಹಿ ಹಾಕಿ ಪತ್ರ ನೀಡಿದರು. ಅಲ್ಲದೆ, ಬಳಿಕ ಆನಂದ ಅವರಿಗೆ ಕೋಟ್ಯಾಕ್ಸಿನ್ ಲಸಿಕೆ ಹಾಕಿಸಲಾಯಿತು.